ನನ್ನ ವಿರುದ್ಧ ಹೇಳಿಕೆ ಕೊಟ್ರೆ ಪರಿಣಾಮ ನೆಟ್ಟಗಿರಲ್ಲ- ರೇವಣ್ಣಗೆ ಜಮೀರ್ ಖಡಕ್ ಎಚ್ಚರಿಕೆ

ತುಮಕೂರು: ದೇವೇಗೌಡರ ಹೊರತಾಗಿ ಬೇರೆ ಯಾರಾದ್ರೂ ನನ್ನ ವಿರುದ್ಧ ಹೇಳಿಕೆ ಕೊಟ್ಟರೆ ಅದರ ಪರಿಣಾಮ ನೆಟ್ಟಗಿರಲ್ಲ. ಅಂಥವರ ಬಂಡವಾಳ ಬಿಚ್ಚಿಡುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಎಚ್.ಡಿ.ರೇವಣ್ಣರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್, ನಾನು ಚಾಮರಾಜಪೇಟೆ ಕಾಂಗ್ರೆಸ್ ಮುಖಂಡ ದೇವರಾಜುಗೆ ಟೋಪಿ ಹಾಕಿರೋದಾಗಿ ಎಚ್‍ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ರೇವಣ್ಣ ನನ್ನ ವಿರುದ್ಧ ಹೇಳಿಕೆ ನೀಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಲಿ. ಜಮೀರ್ ಅಹಮದ್ ಖಾನ್ ಎಂದೂ ಭಯಪಡುವ ವ್ಯಕ್ತಿಯಲ್ಲ ಎಂದು ಗುಡುಗಿದ್ದಾರೆ.

ನಾನು ಯಾರಿಗೂ ಟೋಪಿ ಹಾಕಿಲ್ಲ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ರೇವಣ್ಣ ಸ್ವತಃ ಕುಮಾರಸ್ವಾಮಿಯವರಿಗೆ ಹಾಗೂ ದೇವೇಗೌಡರಿಗೆ ಟೋಪಿ ಹಾಕಿದ್ದರು. ಕುಮಾರಸ್ವಾಮಿ ಹಾಗೇನಾದ್ರು ಮುಖ್ಯಮಂತ್ರಿ ಆದರೆ ದೇವೇಗೌಡರು ವಿಷ ಕುಡಿಯುತ್ತಾರೆ ಎಂದು ಕುಮಾರಸ್ವಾಮಿಯವರಿಗೆ ಭಯಹುಟ್ಟಿಸಿ ಸಿಎಂ ಆಗೋಕೆ ಅಡ್ಡಗಾಲು ಹಾಕಿದ್ದರು ಎಂದು ರೇವಣ್ಣ ವಿರುದ್ಧ ಕಟುಕಿದ್ದಾರೆ.

ಮುಂದಿನ ಚುನಾವಣೆಯಲ್ಲಿ ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಬಹಿರಂಗ ಸವಾಲು ಹಾಕಿದ ಅವರು ಚಾಮರಾಜಪೇಟೆ ಜನರು ನನ್ನನ್ನು ಎಂದಿಗೂ ಕೈ ಬಿಡುವುದಿಲ್ಲ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಟರ್ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಒಂದು ಕೆರೆಯಿದ್ದ ಹಾಗೆ, ಈಗ ನಾನು ಸಮುದ್ರದಲ್ಲಿ ಈಜುತಿದ್ದೇನೆ. ಕೆಪಿಸಿಸಿ ಅಧ್ಯಕ್ಷರೇ ನನ್ನ ಕೈ ನನ್ನನ್ನು ಮುಸ್ಲಿಂ ಸಮುದಾಯದ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜೆಡಿಎಸ್‍ನಲ್ಲಿ ಯಾರನ್ನು ಬೆಳೆಯಲು ಅವಕಾಶ ಕೊಟ್ಟಿಲ್ಲ ಎಂದು ಜಮೀರ್ ಆರೋಪಿಸಿದರು.

Comments

Leave a Reply

Your email address will not be published. Required fields are marked *