ಸ್ನೇಹಿತನ ಹೆಗಲೇರಿ ಸಿದ್ದು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಳ್ಳುವುದಂದ್ರೆ ಎಲ್ಲರಿಗೂ ಇಷ್ಟ. ಅವರು ಯಾವುದೇ ಕಾರ್ಯಕ್ರಮಕ್ಕೂ ಹೋದರೂ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿ ಬೀಳುತ್ತಾರೆ. ಸಿದ್ದರಾಮಯ್ಯ ಕೂಡ ಸೆಲ್ಫಿಗೆ ಫೋಸ್ ಕೊಟ್ಟು ತಮ್ಮ ಅಭಿಮಾನಿಗಳ ಆಸೆ ಈಡೇರಿಸುತ್ತಾರೆ. ಅಂತೆಯೇ ಕಾಫಿನಾಡಿನಲ್ಲಿ ಕೂಡ ಜನ ಹರಸಾಹಸ ಪಟ್ಟು ಸೆಲ್ಫಿ ತೆಗೆದುಕೊಂಡ ಪ್ರಸಂಗ ನಡೆದಿದೆ.

ಹೌದು. ಶನಿವಾರ ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳು ಏರ್ಪಡಿಸಿದ್ದ ಪೌರತ್ವ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರುದ್ಧ ಜನಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ರು. ಮಾಜಿ ಸಿಎಂ ವೇದಿಕೆ ಹತ್ತಿ ಮಾತಿಗಿಳಿಯುವ ಮುನ್ನವೇ ಹೌದು ಹುಲಿಯಾ, ಹೌದು ಹುಲಿಯಾ ಎಂದು ಯುವಕರು ಕೂಗಾಡಿದರು.

ಸಿದ್ದರಾಮಯ್ಯ ತಮ್ಮ ವಿಭಿನ್ನ ಶೈಲಿಯಲ್ಲಿ ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಂತೆ ಯುವಕರು ಟೈಗರ್ ಆಫ್ ದಿ ಕರ್ನಾಟಕ ಎಂದು ಕೂಗಾಡಿದರು. ಇವೆಲ್ಲವನ್ನು ಕಂಡ ಸಿದ್ದರಾಮಯ್ಯನವರೇ ಮೀಸೆ ಮರೆಯಲ್ಲಿ ನಕ್ಕರು.

ಭಾಷಣ ಮುಗಿಸಿ ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುವಾಗ ಯುವಕರು ಸೆಲ್ಫಿಗಾಗಿ ಮುಗಿಬಿದ್ದರು. ಕೆಲವರು ಕುರ್ಚಿ ಹಾಕಿಕೊಂಡು ಅದರ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಮತ್ತೆ ಕೆಲವರು ಸ್ನೇಹಿತರ ಹೆಗಲ ಮೇಲೆ ಕೂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನಾಯಕರು ಮಾತನಾಡುವಾಗ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡೋ ಅಭಿಮಾನಿಗಳ ಮಧ್ಯೆ ಅವರು ಎಲ್ಲಾದರೂ ಇರಲಿ, ಯಾರ ಜೊತೆಯಾದರೂ ಇರಲಿ. ನಮಗೆ ಸೆಲ್ಫಿ ಬೇಕಷ್ಟೆ ಎಂದು ಯುವಕರು ನಾನಾ ರೀತಿ ಹರಸಾಹಸಪಟ್ಟು ಸಿದ್ದರಾಮಯ್ಯ ಅವರು ಕಾಣದಿದ್ದರೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

Comments

Leave a Reply

Your email address will not be published. Required fields are marked *