ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ದೇಶದ ಸಾಫ್ಟ್ ವೇರ್ ಹಬ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳೆಷ್ಟು ಸೇಫ್ ಎನ್ನುವ ಅನುಮಾನ ಮೂಡಿದೆ. ಏಕೆಂದರೆ ಕುಡಿಯೋಕೆ ಪಿಜಿಯಲ್ಲಿ ಜಾಗ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ನಗರದ ಬೊಮ್ಮನಹಳ್ಳಿಯಲ್ಲಿರುವ ಗ್ರೀನ್ ಹಿಲ್ಸ್ ಲೇಡಿಸ್ ಪಿಜಿ ಮುಂದೆ ನಡೆದಿದೆ. ಕಳೆದ ಏಪ್ರಿಲ್ 3ರಂದು, ತಡರಾತ್ರಿ 1 ಗಂಟೆ ಸುಮಾರಿಗೆ ಬಂದ ಐದಾರು ಜನರ ತಂಡ, ಪಿಜಿಯೊಳಗೆ ಎಣ್ಣೆ ಹೊಡೆಯೋಕೆ ಒಂದು ರೂಮ್ ಬೇಕು ಎಂದು ಮಾಲೀಕ ಅನಿಲ್ ಕುಮಾರ್‍ಗೆ ಕಾಲ್ ಮಾಡಿದರು.

ಮನೆಯಿಂದ ಹೊರಗೆ ಬಂದ ಅನಿಲ್ ಇದು ಲೇಡಿಸ್ ಪಿಜಿ, ಇಲ್ಲಿ ಹಾಗೆಲ್ಲಾ ಒಳಗೆ ಬಿಡಲ್ಲ ಎಂದು ಹೇಳಿದರು. ಇದೇ ವಿಚಾರವಾಗಿ ಕೆಲಕಾಲ ಮಾತುಕತೆಯೂ ನಡೆಯಿತು. ಈ ಮಾತುಕತೆಯ ನಡುವೆ ಮಾಲೀಕ ಅನಿಲ್ ಕುಮಾರ್, ಮತ್ತೊಬ್ಬ ಮಾಲೀಕ ಭಾಸ್ಕರ್ ರೆಡ್ಡಿಗೆ ಬೊಮ್ಮನಹಳ್ಳಿ ಮಂಜು ಅಂಡ್ ಗ್ಯಾಂಗ್ ದೊಣ್ಣೆ ಹಾಗೂ ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೊಮ್ಮನಹಳ್ಳಿ ಸುತ್ತಮುತ್ತಲಿನ ಈ ಏರಿಯಾದಲ್ಲಿ ಸಿಕ್ಕಾಪಟ್ಟೆ ಪಿಜಿಗಳಿದ್ದು, ಇಲ್ಲಿನ ಕೆಲ ರೌಡಿಗಳು, ಎಲ್ಲಾ ಪಿಜಿಗಳಿಂದ ತಿಂಗಳಿಗೆ ಇಷ್ಟು ಹಣ ಎಂದು ಹಫ್ತಾ ವಸೂಲಿ ಮಾಡುತ್ತಾರೆ. ಈ ಹಣ ಕೊಡಲು ಪಿಜಿ ಮಾಲೀಕ ನಿರಾಕರಿಸಿದರು. ಇದೇ ಕಾರಣಕ್ಕೆ ಕುಡಿಯೋ ನೆಪ ಮಾಡ್ಕೊಂಡು ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಲೀಕ ಭಾಸ್ಕರ್ ರೆಡ್ಡಿ ಆರೋಪಿಸುತ್ತಿದ್ದಾರೆ.

ಈ ಸಂಬಂಧ ಬಂಡೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಾರ ಕಳೆದರೂ, ಇಲ್ಲಿಯವರೆಗೂ ಯಾರನ್ನು ಕೂಡ ಅರೆಸ್ಟ್ ಮಾಡಿಲ್ಲ. ಇಲ್ಲಿ ಹೀಗೆ ದಾಂಧಲೆ ಮೆರೆದ ಹುಡುಗರ ಕಡೆಗೆ ಸ್ಥಳೀಯ ಶಾಸಕರೊಬ್ಬರ ಬಲಗೈ ಬಂಟನ ಸಪೋರ್ಟ್ ಇದೆ. ಆ ಕಾರಣಕ್ಕೆ ಪೊಲೀಸರು, ಅರೆಸ್ಟ್ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

ಹಲ್ಲೆಗೊಳಗಾದ ಇಬ್ಬರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *