ನೀರು ಹಿಡಿಯೋ ವಿಚಾರಕ್ಕೆ ಯುವಕನ ಬರ್ಬರ ಕೊಲೆ!

ಬೆಂಗಳೂರು: ನೀರು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೋಷನ್ ನಗರದಲ್ಲಿ ನಡೆದಿದೆ.

ಮಾಕ್ಸೂದ್ ಅಹ್ಮದ್(26) ಕೊಲೆಯಾದ ಯುವಕ. ಈ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ. ಮಧ್ಯಾಹ್ನ ಅಹ್ಮದ್ ನೀರು ತುಂಬಲು ಹೋಗಿದ್ದ ವೇಳೆ ಅಯೂಬ್ ಮತ್ತು ಪಾಷಾ ಎಂಬವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರಿಬ್ಬರು ಎಲ್ಲಾ ನೀರು ನೀವೇ ತುಂಬಿಕೊಂಡರೆ ನಮಗೆಲ್ಲಿ ನೀರು ಎಂದು ಜಗಳ ತೆಗೆದಿದ್ದಾರೆ. ಬಳಿಕ ಇಬ್ಬರೂ ಅಹ್ಮದ್ ಹಲ್ಲೆ ಮಾಡಿ ತೆರಳಿದ್ದಾರೆ.

ಕೆಲ ಹೊತ್ತಿನ ಬಳಿಕ ಅಯೂಬ್ ಹಾಗೂ ಪಾಷಾ ಮತ್ತೆ ತಮ್ಮ ಸಹಚರರನ್ನು ಕರೆ ತಂದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಇಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ತಕ್ಷಣ ಸ್ಥಳೀಯರು ಮಕ್ಸೂದ್ ಅಹ್ಮದ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಕ್ಸೂದ್ ಮೃತಪಟ್ಟಿದ್ದಾನೆ.

ಈ ಹಿಂದೆ ಆರೋಪಿಗಳು ಹಣಕಾಸಿನ ವಿಚಾರವಾಗಿ ಮಾಕ್ಸೂದ್ ಜೊತೆ ಜಗಳ ಮಾಡಿಕೊಂಡಿದ್ದರು. ಆದರೆ ಭಾನುವಾರ ನೀರು ಹಿಡಿಯೋ ವಿಚಾರವಾಗಿ ಜಗಳವಾಡಿ ಕೊಲೆ ಮಾಡಿದ್ದಾರೆ.

ಸದ್ಯ ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *