ಬಹಿರ್ದೆಸೆಗೆ ತೆರಳಿದ್ದ ಯುವತಿಯನ್ನು ಸಿನಿಮಾ ಸ್ಟೈಲಲ್ಲಿ ಕಿಡ್ನಾಪ್ ಮಾಡ್ದ!

ಯಾದಗಿರಿ: ಯುವತಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಯಾದಗಿರಿ ನಗರದ ಗಂಜ್ ಬಳಿಯ ಬುಡ್ಗಜಂಗಮ ಕಾಲೋನಿಯಲ್ಲಿ ನಡೆದಿದೆ.

ಬಾಬು(25) ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕ. ಕಳೆದ 10ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಯುವತಿ ಬಹಿರ್ದೆಸೆಗೆಂದು ತೆರೆಳಿದ್ದರು. ಈ ವೇಳೆ ಬಾಬು ಬೈಕಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ.

ಬಾಬು ಯುವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪರಾರಿಯಾಗಿದ್ದಾನೆ. ಈ ಹಿಂದೆ ಬಾಬು ತನ್ನ ಮಗಳನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಕೊಳ್ಳಲು ಯತ್ನಿಸಿದ. ಆ ವೇಳೆ ಪೊಲೀಸರಿಗೆ ದೂರು ನೀಡಿದ ಪರಿಣಾಮ ಯುವತಿಯನ್ನು ತಂದು ಬಿಟ್ಟಿದ್ದ. ಈಗ ಮತ್ತೊಮ್ಮೆ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ. ಕೂಡಲೇ ಪೊಲೀಸರು ಕಿಡ್ನಾಪ್ ಆರೋಪಿಗಳನ್ನು ಬಂಧಿಸಿ ತಮ್ಮ ಮಗಳನ್ನು ಒಪ್ಪಿಸಿ ಅಂತ ಯುವತಿಯ ತಂದೆ ಶಂಕರ ಶಾಸ್ತ್ರಿ ಒತ್ತಾಯಿಸಿದ್ದಾರೆ.

ಈಗಾಗಲೇ ಕಿಡ್ನಾಪ್ ಮಾಡಿದ ಆರೋಪಿ ಬಾಬುಗೆ ಮದುವೆ ಆಗಿ ಎರಡು ಮಕ್ಕಳಿದ್ದಾರೆ. ಚಿಕ್ಕ ವಯಸ್ಸಿನ ಹುಡುಗಿಯ ಮೇಲೆ ಕಣ್ಣು ಹಾಕಿ ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾನೆ. ಅಲ್ಲದೆ ಆರೋಪಿ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ಕೇಸ್ ಗಳಿವೆ. ಹಳೆ ದ್ವೇಷಕ್ಕೆ ತನ್ನ ಮಗಳ ತಲೆ ಕೆಡಿಸಿ ಕಿಡ್ನಾಪ್ ಮಾಡಿದ್ದಾನೆ. ಮಗಳು ನಾಪತ್ತೆಯಾದಾಗಿನಿಂದ ಮನೆಯಲ್ಲಿ ಎಲ್ಲರೂ ಊಟ, ನೀರು ಬಿಟ್ಟು ದುಃಖತಪ್ತರಾಗಿದ್ದಾರೆ. ಈ ಘಟನೆ ದೊಡ್ಡ ಅಘಾತ ನೀಡಿದೆ. ಅಲ್ಲದೆ ಯುವತಿ ವಿಚಾರಕ್ಕೆ ಬಾರದಂತೆ ಆರೋಪಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಯುವತಿ ತಾಯಿ ನಾಗಮ್ಮ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿ ಮಾಡುವ ನಾಟಕವಾಡಿ ಯುವತಿಯನ್ನು ನಂಬಿಸಿ ಕಿಡ್ನಾಪ್ ಮಾಡಿದ್ದಾನೆ. ಈ ಬಗ್ಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಕೊಂಡ ಪೊಲೀಸರು, ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

Comments

Leave a Reply

Your email address will not be published. Required fields are marked *