ವೀಕೆಂಡ್ ಕಳೆಯಲು ಹೊರಟಿದ್ದಾಗ ಕಾರ್ ಟೋಲ್ ಕಂಬಕ್ಕೆ ಡಿಕ್ಕಿ- ಯುವಕನ ದುರ್ಮರಣ

ಹಾಸನ: ವೀಕೆಂಡ್ ಕಳೆಯಲು ಹೊರಟ್ಟಿದ್ದ ಸಂದರ್ಭದಲ್ಲಿ ಕಾರ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಡೆನೂರು ಬಳಿ ನಡೆದಿದೆ.

ಕೃಷ್ಣ(28) ಮೃತ ದುರ್ದೈವಿ. ರಾಕೇಶ್, ಸತೀಶ್, ವಿಜಯ್ ಮತ್ತು ಕೃಷ್ಣ ಎಂಬವರು ಕೆಎ 53 ಎಂಇ 3224 ನಂಬರಿನ ಸುಜುಕಿ ಬಲೆನೋ ಕಾರಿನಲ್ಲಿ ವೀಕೆಂಡ್ ಕಳೆಯಲೆಂದು ಬೆಂಗಳೂರು- ಮಂಗಳೂರು ಮಾರ್ಗವಾಗಿ ಸಕಲೇಶಪುರದ ರೆಸಾರ್ಟ್‍ಗೆ ಹೊರಟ್ಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇವರೆಲ್ಲರೂ ಬೆಂಗಳೂರಿನ ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಲ್ಲಿ ಮೂವರು ಆಂಧ್ರ ಮೂಲದವರಾಗಿದ್ದಾರೆ.

ಕಾರನ್ನು ಅತೀ ವೇಗವಾಗಿ ಓಡಿಸಿಕೊಂಡು ಹೋಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿರೋ ಮಡೆನೂರು ಬಳಿ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ 3 ಸುತ್ತು ಕಾರು ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಕೃಷ್ಣ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರಿನಲ್ಲಿ ಮದ್ಯ ಬಾಟಲ್‍ಗಳು ಪತ್ತೆಯಾಗಿವೆ. ಕಾರು ಕಂಬಕ್ಕೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಘಟನೆ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *