ಪ್ರೀತಿಸಿದ ಯುವತಿ ಜೊತೆ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು!

ಮೈಸೂರು: ಪ್ರೀತಿಸಿದ ಯುವತಿ ಜೊತೆ ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣಾಗಿರೋ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

ದೀಪಕ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕ್ಯಾತಮಾರನಹಳ್ಳಿಯ ಅನಿತಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಮದುವೆ ಆಗುವಂತೆ ಅನಿತಾ ಹಾಗೂ ಪೋಷಕರು ದೀಪಕ್ ಮೇಲೆ ಒತ್ತಡ ಹೇರಿದ್ದರು. ಆಗ ದೀಪಕ್ ಸದ್ಯಕ್ಕೆ ಮದುವೆ ಬೇಡ ಎಂದು ಹೇಳಿದ್ದ.

ಇನ್ನೂ ಎರಡು-ಮೂರು ವರ್ಷ ಮದುವೆ ಆಗುವುದಕ್ಕೆ ಆಗುವುದಿಲ್ಲ ಎಂದು ದೀಪಕ್ ಹೇಳಿದ್ದ. ಆದರೂ ಅನಿತಾ ಪೋಷಕರು ಉದಯಗಿರಿ ಪೊಲೀಸ್ ಠಾಣೆಗೆ ದೀಪಕ್‍ನನ್ನು ಕರೆಸಿ ಮದುವೆ ನಿಗದಿ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದರು ಎನ್ನಲಾಗುತ್ತಿದೆ.

ಮದುವೆ ದಿನಾಂಕ ನಿಶ್ಚಯಿಸುವಂತೆ ಅನಿತಾ ಮನೆಯವರಿಂದ ಯಾವಾಗ ವಿಪರೀತ ಒತ್ತಡ ಉಂಟಾಯಿತೋ ಇದರಿಂದ ಬೇಸತ್ತ ದೀಪಕ್ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ದೀಪಕ್ ಪೋಷಕರು, ಅನಿತಾ ಹಾಗೂ ಆಕೆಯ ಪೋಷಕರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *