ಕುಡಿದ ಮತ್ತಲ್ಲಿ ಮಹಿಳಾ ಭಕ್ತರನ್ನು ಚುಡಾಯಿಸಿದ ಬೆಂಗ್ಳೂರು ಯುವಕರಿಗೆ ಧರ್ಮದೇಟು

ಮೈಸೂರು: ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.

ಚಿಕ್ಕಮ್ಮ ಚಿಕ್ಕದೇವಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಯುವಕರು ಬೆಟ್ಟದ ಸಮೀಪವೇ ಕಾರು ನಿಲ್ಲಿಸಿ ಕಾರಿನೊಳಗೆ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ದೇವಸ್ಥಾನಕ್ಕೆ ಬರುತ್ತಿದ್ದ ಮಹಿಳಾ ಭಕ್ತರನ್ನು ಅವಾಚ್ಯ ಪದಗಳಿಂದ ಚುಡಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ಕಾರಿನಲ್ಲಿ ಸುಮಾರು ನಾಲ್ವರು ಯುವಕರಿದ್ದರು ಎಂದು ತಿಳಿದು ಬಂದಿದೆ. ಇದನ್ನು ನೋಡಿದ ಸ್ಥಳೀಯರು ರೊಚ್ಚಿಗೆದ್ದು ಏಕಾಏಕಿ ಕಾರಿನಿಂದ ಹೊರಗಡೆ ಎಳೆದು ಥಳಿಸಿದ್ದಾರೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕರು ಕಾರಿನ ಬಾಗಿಲು ಹಾಕಿಕೊಂಡಿದ್ದರಿಂದ ಸ್ಥಳೀಯರು ಕಾರನ್ನು ಜಖಂಗೊಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಯುವಕರು ಅವರಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments

Leave a Reply

Your email address will not be published. Required fields are marked *