ಚಿಕ್ಕಬಳ್ಳಾಪುರ: ನಾಳೆ ನನ್ನ ಸಾವು ಅಂತ ಫೇಸ್ಬುಕ್ನಲ್ಲಿ ಯುವಕನೊರ್ವ ಪೋಸ್ಟ್ ಮಾಡಿ ಪೇಚೆಗೆ ಸಿಲುಕಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಮೂಲದ ಜಯಚಂದ್ರ ರೆಡ್ಡಿ ತನ್ನ ಫೇಸ್ಬುಕ್ ಅಕೌಂಟ್ನಲ್ಲಿ “ಈ ಜೀವನ ಸಾಕಾಗಿದೆ ನಾಳೆ ನನ್ನ ಸಾವು” ಅಂತ ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಫೇಸ್ಬುಕ್ನ ಸ್ನೇಹಿತರು ಯಾಕೆ ಏನು ಎತ್ತ ಅಂತ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಕೆಲ ಪರಿಚಯಸ್ಥರು ಫೋನ್ ಮಾಡಿ ಕೇಳಿದ್ದಾರೆ.
ಜಯಚಂದ್ರ ರೆಡ್ಡಿ ಇದರಿಂದ ಕೂಡಲೇ ಎಚ್ಚೆತ್ತುಕೊಂಡು ತನ್ನ ಪೋಸ್ಟ್ ಡಿಲೀಟ್ ಮಾಡಿ ಸುಮ್ಮನಾಗಿದ್ದಾನೆ. ಆದರೆ ಅಷ್ಟರಲ್ಲೇ ಈ ಪೋಸ್ಟ್ ಸ್ಕ್ರೀನ್ ಶಾಟ್ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಜಯಚಂದ್ರನನ್ನು ಠಾಣೆಗೆ ಕರೆಸಿ ವಿಚಾರ ನಡೆಸಿ ಬುದ್ಧಿವಾದ ಹೇಳುವಂತೆ ಡಿಸಿಬಿ ಪೊಲೀಸರಿಗೆ ತಿಳಿಸಿದ್ದಾರೆ.

ಸದ್ಯ ಡಿಸಿಬಿ ಪೊಲೀಸರು ಜಯಚಂದ್ರನಿಗೆ ಕರೆ ಮಾಡಿದ್ದು, ಆತ ತಾನು ಸೇಟ್ ದಿನ್ನೆ ಬಳಿಯ ಲಿಂಪಾಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಪೊಲೀಸ್ ಠಾಣೆ ಬಂದ ಜಯಚಂದ್ರ ವಿಚಾರಣೆ ವೇಳೆ ಜಯಚಂದ್ರ ಸುಮ್ಮನೆ ಪೋಸ್ಟ್ ಮಾಡಿದೆ ಅಂತ ಪೊಲೀಸರ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಅಂದಹಾಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸೇರಿದಂತೆ ಅತ್ಮಹತ್ಯೆಗೆ ಪ್ರಚೋದನೆ ನೀಡುವುದು ಕೂಡ ಅಪರಾಧವಾಗಿದೆ. ಯುವಕರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿನ ಸಂದೇಶಗಳನ್ನು ಸಾರೋದು ಜಾಸ್ತಿಯಾಗುತ್ತಿದ್ದು, ಇದು ಪೊಲೀಸರಿಗೆ ಒಂದೆಡೆ ತಲೆನೋವಾಗಿ ಪರಿಣಮಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply