ಸೇನಾ ತರಬೇತಿಯಲ್ಲಿದ್ದ ಕೊಡಗಿನ ಯುವಕ ಆತ್ಮಹತ್ಯೆ

ಮಡಿಕೇರಿ: 22ರ ಹರೆಯದ ಕೊಡಗಿನ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ವಸತಿ ಗೃಹದಲ್ಲಿ ನಡೆದಿದೆ.

ಬೋಪಣ್ಣ (22) ಆತ್ಮಹತ್ಯೆ ಮಾಡಿಕೊಂಡ ಯೋಧ. ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದವರಾಗಿರುವ ಬೋಪಣ್ಣ ಪುಣೆಯ ಸೇನಾ ತರಬೇತಿ ಶಿಬಿರದಲ್ಲಿದ್ದರು. ಪುಣೆಯ ವಸತಿಗೃಹದಲ್ಲಿ ಬೋಪಣ್ಣ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೋಪಣ್ಣ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದೆ. ಆ ಪತ್ರದಲ್ಲಿ, “ನಾನು ನನ್ನ ಸ್ವಇಚ್ಛೆಯಿಂದ ಸಾಯುತ್ತಿದ್ದೇನೆ. ಇದಕ್ಕೆ ಯಾರೂ ಹೊಣೆಯಲ್ಲ. ಯಾರಿಗೂ ಶಿಕ್ಷಿಸಬೇಕಾಗಿಲ್ಲ” ಎಂದು ಬರೆದಿದ್ದಾರೆ. ಬೋಪಣ್ಣ ಕೇವಲ ಎರಡು ಲೈನ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತುಂಬಾ ಬಡಕುಟುಂಬದಿಂದ ಹೋದ ಬೋಪಣ್ಣ ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಹೇಳುತ್ತಿದ್ದರು. ಅಲ್ಲದೆ ಬೋಪಣ್ಣರಿಗೆ ದೇಶದ ಮೇಲೆ ತುಂಬಾ ಅಭಿಮಾನ ಇತ್ತು ಎನ್ನಲಾಗಿದೆ. ಆದರೆ ಬೋಪಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದ್ದಕ್ಕೆ ನಿಖರವಾದ ಕಾರಣ ಮಾತ್ರ ತಿಳಿದು ಬಂದಿಲ್ಲ.

Comments

Leave a Reply

Your email address will not be published. Required fields are marked *