ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ – ದೀಪಾವಳಿ ದಿನವೇ ಹರಿಯಿತು ನೆತ್ತರು!

ಹುಬ್ಬಳ್ಳಿ: ದೀಪಾವಳಿ ಹಬ್ಬದ ದಿನವೇ ನೆತ್ತರು ಹರಿದಿದ್ದು, ತಮ್ಮನಿಂದಲೇ ಅಣ್ಣ ಕೊಲೆಯಾಗಿರುವ ಘಟನೆ ಗೋಕುಲ ಗ್ರಾಮದಲ್ಲಿ ನಡೆದಿದೆ.

ಭೀಮಶಿ ಬೆಂಗೇರಿ (36) ಕೊಲೆಯಾದ ದುರ್ದೈವಿ. ಇಂದು ಸಂಜೆ ಗೋಕುಲ ಗ್ರಾಮದ ರಂಗಮಂದಿರದ ಬಳಿ ತಮ್ಮ ಬಸು ಬೆಂಗೇರಿ (34) ತನ್ನ ಅಣ್ಣ ಭೀಮಶಿಯನ್ನು ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ನಡೆಸಿದ ಆರೋಪಿ ಸಹೋದರ ಪೊಲೀಸರಿಗೆ ಶರಣಾಗಿದ್ದಾನೆ.

ಸ್ಥಳೀಯರ ಮಾಹಿತಿಗಳ ಪ್ರಕಾರ ಇಬ್ಬರೂ ಇತ್ತೀಚೆಗಷ್ಟೇ ಜಮೀನನ್ನು ಭಾಗ ಮಾಡಿಕೊಂಡಿದ್ದರು. ಆದರೆ ಬಸು ಬೆಂಗೇರಿ ಕೇಳಿದ್ದ ಜಮೀನನ್ನು ಭೀಮಶಿ ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಇಬ್ಬರಿಗೂ ಆಗಾಗ ಜಗಳ ನಡೆಯುತ್ತಲೇ ಇತ್ತು. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಮುಖ್ಯಸ್ಥರು ಇವರಿಬ್ಬರ ನಡುವೆ ರಾಜಿ ಪಂಚಾಯಿತಿಯನ್ನು ನಡೆಸಿದ್ದರು. ಆದರೆ ಅದು ಪ್ರಯೋಜನವಾಗಿರಲಿಲ್ಲ. ಜಮೀನನ್ನು ಬಿಟ್ಟುಕೊಡದಿದ್ದರಿಂದ ಸಿಟ್ಟಿಗೆದ್ದ ಬಸು ಇಂದು ತನ್ನ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮೃತ ಭೀಮಶಿ ಬೆಂಗೇರಿ ಶ್ರೀರಾಮ ಸೇನೆ ಜಿಲ್ಲಾ ಉಪಾಧ್ಯಕ್ಷನಾಗಿದ್ದರೆ, ಕೊಲೆ ಮಾಡಿದ ಬಸು ಬಂಗೇರಿ ಈ ಮೊದಲು ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *