ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಯೇಸುದಾಸ್ 78 ನೇ ಹುಟ್ಟಹಬ್ಬ ಆಚರಣೆ

ಉಡುಪಿ: ಕೊಲ್ಲೂರಮ್ಮನ ಮುಂದೆ ಸಂಗೀತ ಸೇವೆ ನೀಡಿ ಗಾನ ಗಂಧರ್ವ -ಸಂಗೀತ ಮಾಂತ್ರಿಕ ಕೆ.ಜೆ.ಯೇಸುದಾಸ್ ತನ್ನ 78 ನೇ ಹುಟ್ಟುಹಬ್ಬವನ್ನು ಧಾರ್ಮಿಕವಾಗಿ ಆಚರಿಸಿಕೊಂಡರು.

ಎಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟ ಯೇಸುದಾಸ್, ಪ್ರತಿ ವರ್ಷ ತನ್ನ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಆಚರಿಸುತ್ತಾರೆ. ತಾಯಿ ಮೂಕಾಂಬಿಕೆಯ ದರ್ಶನ ಮಾಡಿದ ಅವರು, ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆಯನ್ನು ನೆರವೇರಿಸಿದರು. ಬಳಿಕ ಯಜ್ಞ ಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾದರು. ದೇವಿ ಮೂಕಾಂಬಿಕೆಯ ಸನ್ನಿಧಿಯ ಒಳ ಭಾಗದಲ್ಲಿ ಯೇಸುದಾಸ್ ಸಂಗೀತ ಸೇವೆಯನ್ನು ದೇವಿಗೆ ಅರ್ಪಿಸಿದರು. ಪ್ರತಿ ವರ್ಷದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತ ಸೇವೆ ನೀಡುವ ಮೂಲಕ ದೇವರ ನಾಮ ಹಾಡಿದರು.

ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದಿದ್ದ ಸಾವಿರಾರು ಮಂದಿ ದೇವರ ದರ್ಶನದ ಜೊತೆ ಸಂಗೀತ ಕ್ಷೇತ್ರದ ಮಹಾನ್ ಕಲಾವಿದರ ಹುಟ್ಟುಹಬ್ಬದಲ್ಲಿ ಭಾಗಿಯಾದರು. ನೆಚ್ಚಿನ ಕಲಾವಿದನಿಗೆ ಶುಭಾಶಯಗಳನ್ನು ಕೋರಿದರು.

Comments

Leave a Reply

Your email address will not be published. Required fields are marked *