ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

ಕಾರವಾರ: ಉಪ ಚುನಾವಣೆ ಮತದಾನಕ್ಕೆ ಎರಡೇ ದಿನ ಬಾಕಿ ಉಳಿದಿದೆ. ಬಿಜೆಪಿ ಸೇರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‍ರನ್ನು ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ಮತ ಬೇಟೆಗೆ ಭರ್ಜರಿ ತಂತ್ರ ಹೆಣೆದಿದೆ. ಇದರಿಂದಾಗಿ ಹೆದರಿದ ಹೆಬ್ಬಾರ್, ಜಾತಿ ಮತ ಭೇಟೆಗಾಗಿ ಮಠಗಳ ಮೊರೆ ಹೋಗಿದ್ದಾರೆ.

ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಶಿವರಾಮ್ ಹೆಬ್ಬಾರ್ ಅವರಿಗೆ ಗೆಲ್ಲುವ ಅನಿವಾರ್ಯತೆಯಿದೆ. ಇತ್ತ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಕಣಕ್ಕಿಳಿಸಿದ್ದು, ಖುದ್ದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಳತ್ವ ವಹಿಸಿದ್ದಾರೆ. ಹೀಗಾಗಿ ಹೆಬ್ಬಾರ್ ಪರ ಇದ್ದ ಮತದಾರರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ತಂತ್ರಗಾರಿಕೆಯಿಂದ ಹೆದರಿರುವ ಹೆಬ್ಬಾರ್, ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿರುವ ಬ್ರಾಹ್ಮಣ ಹಾಗೂ ಹಿಂದುಳಿದ ಮತಗಳ ಓಲೈಕೆಗೆ ಇಳಿದಿದ್ದಾರೆ. ರಾತ್ರೋರಾತ್ರಿ ಬ್ರಾಹ್ಮಣ ಜನಾಂಗದ ಮಠಾಧೀಶರರಾದ ಸ್ವರ್ಣವಳ್ಳಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮೊರೆ ಹೋಗಿ, ತಮ್ಮ ಪರ ಇರುವಂತೆ ಕೇಳಿಕೊಂಡಿದ್ದಾರೆ. ತನ್ನ ಹೆಸರು ಬಳಸಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೇಳುತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಆರೋಪಿಸಿದ್ದಾರೆ.

ಕಾಂಗ್ರೆಸ್‍ಗೆ ದ್ರೋಹ ಬಗೆದ ಹೆಬ್ಬಾರ್‍ರನ್ನು ಸೋಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಖುದ್ದು ಕ್ಷೇತ್ರದ ತುಂಬಾ ಓಡಾಡಿ, ದಲಿತ ಮತ್ತು ಅಹಿಂದ ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಇದು ಕಾಂಗ್ರೆಸ್‍ನ ಭರವಸೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಕ್ಷೇತ್ರದಲ್ಲಿ ಎರಡನೇ ಅತಿಹೆಚ್ಚು ಮತದಾರರಾಗಿರುವ ನಾಯಕ ಜನಾಂಗದವರಾಗಿದ್ದು, ನಾಯಕ ಜನಾಂಗ ಇವರ ಪರ ನಿಂತಿದೆ.

Comments

Leave a Reply

Your email address will not be published. Required fields are marked *