ಚಿತ್ರದುರ್ಗ: ಮಾಜಿ ಸಿಎಂ ಯಡಿಯೂರಪ್ಪ ಡಾಕ್ಟರ್ ಅಲ್ಲ, ಕಾಂಗ್ರೆಸ್ನಲ್ಲಿ ಯಾರೂ ಪೇಷಂಟ್ಗಳಿಲ್ಲ. ಹೀಗಾಗಿ ಆಪರೇಷನ್ ಕಮಲ ನಡೆಯೋದಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದ್ದಾರೆ.
ಜಿಲ್ಲಾಪಂಚಾಯತ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ನಡೆಯಲ್ಲ. ನಮ್ಮ ಶಾಸಕರೆಲ್ಲ ದೇವಸ್ಥಾನಗಳಿಗೆ ಪ್ರವಾಸ ಹೋಗಿದ್ದರು ಅಷ್ಟೇ. ಬಿಜೆಪಿಯಿಂದ ಆಪರೇಷನ್ ಕಮಲ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಬಳಿಕ ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ನಡೆದ ಲಂಚ ಪ್ರಕರಣದ ಬಗ್ಗೆ ಮಾತನಾಡಿದ ಅವರು ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಚೇರಿಯ ಒಳಗೆ ಈ ಘಟನೆ ಆಗಿದ್ದರೆ, ನಾನು ಅದಕ್ಕೆ ಉತ್ತರಿಸುತ್ತಿದ್ದೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾಪಂಚಾಯತ್ ಸದಸ್ಯ ಯೋಗೀಶ್ ಬಾಬು ಹೆಸರು ಕೂಡ ಕೇಳಿ ಬಂದಿದೆ. ಒಂದು ವೇಳೆ ಆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾನೇ ಒತ್ತಾಯಿಸುತ್ತೇನೆ ಎಂದರು.

ಅಲ್ಲದೇ ರೆಸಾರ್ಟ್ ರಾಜಕೀಯದ ಬಗ್ಗೆ ಸಹ ಪ್ರತಿಕ್ರಿಯಿಸಿದ ಸಚಿವರು, ರೆಸಾರ್ಟ್ ನಲ್ಲಿ ಕಿತ್ತಾಡಿರುವ ಶಾಸಕ ಗಣೇಶ್ ನನ್ನು ಪಕ್ಷದಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ಅದು ಅವರ ವೈಯಕ್ತಿಕ ದ್ವೇಷದಿಂದ ಗಲಾಟೆ ನಡೆದಿದೆ. ಹೀಗಾಗಿ ಈ ಗಲಾಟೆ ಕುರಿತು ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply