ರಾಜಕೀಯ ಪ್ರವೇಶ, ಊಹಾ ಪೋಹಾಕ್ಕೆ ಯದುವೀರ್ ಸ್ಪಷ್ಟನೆ

ಹಾಸನ: ಮೈಸೂರು ಮಹಾರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾ ಪೋಹಾಕ್ಕೆ ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ ಮಾಡಿರುವ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಇದೇ ಮೊದಲ ಬಾರಿಗೆ ಹಾಸನಕ್ಕೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿಯಿಂದ ಯಧುವೀರ್ ಸ್ಪರ್ಧೆ?

ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಜರು, ಸದ್ಯ ಅದೆಲ್ಲಾ ಬರೀ ಊಹಾಪೋಹ. ಅಂಥ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ. ಮೈಸೂರಿನ ಪಾರಂಪರಾಗತ ಪರಂಪರೆ ಉಳಿಸಿಕೊಳ್ಳೋದು ಜೊತೆಗೆ ತಾನು ಸಮಾಜಸೇವೆಯಲ್ಲಿ ಅಥವಾ ಕೆಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುಂದುವರಿಸುವುದಾಗಿ ಹೇಳಿದರು.

ಭವಿಷ್ಯದಲ್ಲಿ ಚುನಾವಣೆ ನಿಲ್ಲುವ ಬಗ್ಗೆ ಉತ್ತರ ನೀಡಲು ಯದುವೀರ್ ನಿರಾಕರಿಸಿದ್ದು, ನಾನು ವಿದೇಶದಲ್ಲಿ ಇದ್ದುದರಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರದಲ್ಲೇ ಮಡಿಕೇರಿಗೆ ಭೇಟಿ ನೀಡುವೆ ಎಂದು ತಿಳಿಸಿದರು.

ಇದೇ ವೇಳೆ ಮೈಸೂರಿನ ಅರಸರಿಗೆ ರಾಜಧನ ನೀಡಿಕೆ ವಿಚಾರ ಕುರಿತ ಪ್ರಶ್ನೆಗೆ, ಈ ಬಗ್ಗೆ ತನಗೆ ಹೆಚ್ಚಿನ ಮಾಹಿತಿಯಿಲ್ಲ. ಅರಮನೆ ಕಚೇರಿಯಲ್ಲಿ ಕೇಳಿ ಎಂದಷ್ಟೇ ಹೇಳಿದರು. ಬಳಿಕ ಹಾಸನದ ಖಾಸಗಿ ಹೋಟೆಲ್ ನಿಂದ ಕಾರ್ಯಕ್ರಮ ನಡೆಯುವ ಕಲಾಭವನದವರೆಗೆ ಮಹಾರಾಜರನ್ನು ಸಾರೋಟ ಮೆರವಣಿಗೆ ಕರೆದೊಯ್ಯಲಾಯಿತು. ಈ ವೇಳೆ ವೀರಗಾಸೆ ಕುಣಿತ, ಪೂರ್ಣಕುಂಭ ಸ್ವಾಗತ ಮೆರವಣಿಗೆ ಗಮನ ಸೆಳೆಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *