ಒಂದು ಹೊತ್ತಿನ ಊಟಕ್ಕೂ ಕಣ್ಣೀರು ಹಾಕ್ತಿವೆ ಜೋಗಾರ ಕುಟುಂಬ

ಯಾದಗಿರಿ: ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇತ್ತ ಇದರಿಂದ ಅನೇಕ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದೆ. ಹೀಗೆ ಯಾದಗಿರಿಯಲ್ಲೂ ಜೋಗಾರ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಕಣ್ಣೀರು ಸುರಿಸುತ್ತಿವೆ.

ಹೌದು. ಜಿಲ್ಲೆಯ ಸುರಪುರ ತಾಲೂಕಿನಲ್ಲಿ ವಿವಿಧೆಡೆ ನಡೆಯುವ ಜಾತ್ರೆ, ಸಂತೆಗಳಲ್ಲಿ ಸೂಜಿ, ಪಿನ್ನು, ಡಬ್ಬಣ ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ಬುಟ್ಟಿಯಲ್ಲಿ ಹೊತ್ತು ಮನೆ ಮನೆಗೆ ಹೋಗಿ ಅವುಗಳನ್ನು ಮಾರಾಟ ಮಾಡುತ್ತಾರೆ. ಈ ಮೂಲಕ ಜೀವನ ನಡೆಸುವ ಜೋಗಾರ ಕುಟುಂಬಗಳು ಕೊರೊನಾ ಲಾಕ್‍ಡೌನ್ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿವೆ.

ನಗರದ ಕುಂಬಾರಪೇಟೆಯ ಬೀದರ್- ಬೆಂಗಳೂರು ಮುಖ್ಯ ಹೆದ್ದಾರಿಯ ಪಕ್ಕದಲ್ಲಿ ಚಿಕ್ಕ ಚಿಕ್ಕ ತಗಡಿನ ಗುಡಿಸಲುಗಳು ಹಾಕಿಕೊಂಡು ಊರುಗಳಲ್ಲಿ ಪ್ಲಾಸ್ಟಿಕ್ ಸಾಮಾನು ಮಾರಾಟ ಮಾಡುತ್ತಾರೆ. ಈ ಮೂಲಕ ಜೀವನ ನಡೆಸುವ ಕುಟುಂಬಗಳಿಗೆ ಈಗ ಲಾಕ್‍ಡೌನ್ ಬಿಸಿ ತಟ್ಟಿದ್ದು, ತಿನ್ನಲು ಅನ್ನವೂ ಇಲ್ಲ, ಇತ್ತ ವ್ಯಾಪಾರವೂ ಇಲ್ಲ. ಕೈಯಲ್ಲಿ ಹಣ ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.

ಐದು ಮನೆಗಳಲ್ಲಿ ಒಟ್ಟು 40 ಜನ ಸದಸ್ಯರಿದ್ದು, ಇವರಲ್ಲಿ ಎರಡು ಕುಟುಂಬಗಳಲ್ಲಿ ಮಾತ್ರ ಪಡಿತರ ಚೀಟಿ ಇದೆ. ಆ ಎರಡು ಚೀಟಿಗೆ ಎರಡು ತಿಂಗಳ ಪಡಿತರ ಎಂದು ಕೇವಲ 40 ಕೆ.ಜಿ ಅಕ್ಕಿ ನೀಡಲಾಗಿತ್ತು. ಸರ್ಕಾರ ನೀಡಿದ ಪಡಿತರ ಧಾನ್ಯಗಳು ಕೇವಲ 20 ದಿನಕ್ಕೆ ಖಾಲಿಯಾಗಿದೆ. ಈಗ ಈ ಕುಟುಂಬಗಳು ತಿನ್ನಲು ಒಂದು ಹೊತ್ತು ಅನ್ನವಿಲ್ಲದೆ ಕಂಗಾಲಾಗಿವೆ.

Comments

Leave a Reply

Your email address will not be published. Required fields are marked *