ಯಾದಗಿರಿಯಲ್ಲಿ ಅಬಕಾರಿ ಅಧಿಕಾರಿಗಳ ದಾಳಿ 14 ಪ್ರಕರಣ ದಾಖಲು

– 1 ಲಕ್ಷ ರೂ. ಅಬಕಾರಿ ಪದಾರ್ಥ ಜಪ್ತಿ

ಯಾದಗಿರಿ: ಜಿಲ್ಲೆಯಾದ್ಯಂತ ಖಚಿತ ಬಾತ್ಮಿ ಮಾಹಿತಿ ಹಾಗೂ ದೂರಿನ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಈವರೆಗೆ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡು, ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಈ ವರೆಗೆ ಜಿಲ್ಲೆಯಲ್ಲಿ 30.600 ಲೀಟರ್ ಮದ್ಯ, 9.120 ಲೀಟರ್ ಬೀಯರ್, 455 ಲೀಟರ್ ಸೇಂದಿ, 25 ಲೀಟರ್ ಕಳ್ಳಭಟ್ಟಿ ಸಾರಾಯಿ, 290 ಲೀಟರ್ ಬೆಲ್ಲದ ಕೊಳೆ, 20 ಕೆ.ಜಿ ಕೊಳೆತ ಬೆಲ್ಲ, 25 ಕೆ.ಜಿ ಸಿ.ಹೆಚ್.ಪೌಡರ್ ಮತ್ತು 8 ಕೆ.ಜಿ.ಕಳ್ಳಭಟ್ಟಿ ಸಾರಾಯಿಗೆ ಬಳಸುವ ಗಿಡದ ಚಕ್ಕೆ ಸೇರಿದಂತೆ ಸುಮಾರು 98,650 ರೂ. ಮೌಲ್ಯದ ಅಬಕಾರಿ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಉಪ ಆಯುಕ್ತರ ಕಚೇರಿಯ ಪ್ರಭಾರಿ ಅಬಕಾರಿ ಉಪ ಅಧೀಕ್ಷಕ ಶ್ರೀರಾಮ ರಾಠೋಡ, ರಾಜ್ಯಾದ್ಯಂತ ಕೊರೊನಾ ವೈರಸ್ (ಕೋವಿಡ್-19) ನಿಯಂತ್ರಿಸಲು ಅನುಕೂಲವಾಗುವಂತೆ ಸಂಪೂರ್ಣ ಲಾಕ್‍ಡೌನ್ ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಯುತ್ತಿವೆ. ಇವುಗಳನ್ನು ತಡೆಯಲು ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ ಅವರ ಆದೇಶಾನುಸಾರ ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಶಹಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹಮ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡ ಅಕ್ರಮ ಮದ್ಯ ಹಾಗೂ ಸಂಬಂಧಿಸಿದ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದರು.

ದಾಳಿಗಳಲ್ಲಿ ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ, ಭೀಮಣ್ಣ ರಾಠೋಡ, ಶ್ರೀಶೈಲ್ ಒಡೆಯರ್, ಭಾರತಿ ಹಾಗೂ ಕೇದಾರನಾಥ ಇದ್ದರು.

Comments

Leave a Reply

Your email address will not be published. Required fields are marked *