ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

ನವದೆಹಲಿ: ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ಭಾರತ ತಂಡ ಸಹಾಯ ಮಾಡಬೇಕು ಎಂದು ಪಾಕ್‍ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಅಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿರುವ ಪಾಕಿಸ್ತಾನ ಒಂದು ಪಂದ್ಯ ಮಳೆಯ ಕಾರಣಕ್ಕೆ ರದ್ದು ಮಾಡಿಕೊಂಡು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಲೀಗ್ ಹಂತದಲ್ಲಿ ಎರಡು ಪಂದ್ಯಗಳು ಉಳಿದಿದ್ದು, 2 ಪಂದ್ಯದಲ್ಲೂ ಗೆದ್ದರೂ ಪಾಕ್ ಸೆಮಿ ಫೈನಲ್ ಪ್ರವೇಶದ ಕನಸು ಬೇರೆ ತಂಡದ ಗೆಲುವು ಸೋಲಿನ ಮೇಲೆ ಅವಲಂಬಿತವಾಗಿದೆ.

ಈ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ವಿಶ್ವಕಪ್‍ನಲ್ಲಿ ತಮ್ಮ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ನಮಗೆ ಭಾರತ ತಂಡ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಅಡಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ವಿಶ್ವಕಪ್‍ನಿಂದ ಇಂಗ್ಲೆಂಡ್ ಹೊರಬೀಳುತ್ತದೆ. ಆಗ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಉಳಿದ ಎರಡು ಪಂದ್ಯವನ್ನು ಪಾಕ್ ಗೆದ್ದು 11 ಅಂಕಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಪಾಕಿಸ್ತಾನ ವಿಶ್ವಕಪ್‍ನಲ್ಲಿ ತುಂಬ ಒಳ್ಳೆಯ ಕಮ್‍ಬ್ಯಾಕ್ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಈಗ ಭಾರತ ನಮಗೆ ಸಹಾಯ ಮಾಡಬೇಕು ಮುಂದಿನ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಮತ್ತು ನಾವು ಉಳಿದ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‍ಗೆ ಅರ್ಹತೆ ಪಡೆದು, ಸೆಮಿಸ್ ಪಂದ್ಯವನ್ನು ಇಂಡಿಯಾ ವಿರುದ್ಧ ಅಡಿ ಅವರನ್ನು ಸೋಲಿಸಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಒಂದು ವೇಳೆ ಜೂನ್ 30 ರಂದು ನಡೆಯುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೂ, ತನ್ನ ಮುಂದಿನ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಸೋಲುತ್ತದೆ. ಅಗ ಮತ್ತೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಅರ್ಹತೆ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ಒಂದು ಉತ್ತಮ ವಿಶ್ವಕಪ್ ಟೂರ್ನಿಯಾಗಲಿದೆ ಮತ್ತು ನಮ್ಮ ಪಾಕಿಸ್ತಾನ ಸೆಮಿಫೈನಲ್ ತಲುಪುವ ಹಾದಿಯಲ್ಲಿದೆ. ಪಾಕಿಸ್ತಾನ ತಂಡವನ್ನು ಎಂದಿಗೂ ಮೂಲೆಗುಂಪು ಮಾಡಬೇಡಿ. ಹಾಗೆ ಮಾಡಿದರೆ ನಮ್ಮ ತಂಡ ಮತ್ತೆ ಕಮ್‍ಬ್ಯಾಕ್ ಮಾಡಿ ನಿಮ್ಮನ್ನು ಸೋಲಿಸುತ್ತದೆ ಎಂದು ಶೋಯೆಬ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *