ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ – ಜಯಗಳಿಸುತ್ತಾ ಭಾರತ?

ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ವೇಸ್ಟ್ ಇಂಡೀಸ್ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮ್ಯಾಂಚೆಸ್ಟರ್‌ನ ಒಲ್ಡ್ ಟ್ರಾಫಾರ್ಡ್ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯುತ್ತಿದ್ದು, ವೆಸ್ಟ್‍ಇಂಡೀಸ್ ಭಾರೀ ಮೊತ್ತ ಸವಾಲು ನೀಡಲು ಟೀಂ ಇಂಡಿಯಾ ಮುಂದಾಗಿದೆ.

ಕಳೆದ 4 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ವೆಸ್ಟ್ ವಿಂಡೀಸ್ ವಿರುದ್ಧವೂ ಜಯ ಗಳಿಸುವ ನೆಚ್ಚಿನ ತಂಡವೆನಿಸಿದೆ. ಆದರೆ ಕಳೆದ ಶನಿವಾರ ಅಫಘಾನಿಸ್ತಾನ ವಿರುದ್ಧದ ನಡೆದ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದು, ಭಾರತ ತಂಡಕ್ಕೆ ಎಚ್ಚರಿಕೆ ನೀಡಿದೆ.

ತಂಡದಲ್ಲಿ ಯಾರಿದ್ದಾರೆ?:
ಈ ಬಾರಿಯೂ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಆರಂಭಿಕ ಬ್ಯಾಟ್ಸಮನ್‍ಗಳಾಗಿ ಮೈದಾನಕ್ಕೆ ಇಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಆಲ್‍ರೌಂಡರ್ ಗಳಾದ ವಿಜಯ್ ಶಂಕರ್, ಕೇದಾರ್ ಜಾಧವ್, ವಿಕೆಟ್ ಕೀಪರ್ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಬೌಲರ್ ಗಳಾದ ಮೊಹಮ್ಮದ ಶಮಿ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಹಾಗೂ ಜಸ್ಪ್ರೀತ್ ಬುಮ್ರಾ ಇದ್ದಾರೆ.

ವಿಶ್ವಕಪ್ ಕದನದಲ್ಲಿ 1992 ರ ಬಳಿಕ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಗೆಲುವನ್ನೇ ಸಾಧಿಸಿಲ್ಲ. 1996, 2011, 2015 ರಲ್ಲಿ ಸೆಣಸಾಟವಾಡಿದರೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸಿಡಿಯುವ ಸಾಧ್ಯತೆಯಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದೆ.

ವೇಗಿ ಭುವನೇಶ್ವರ್ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲೂ ಮೊಹಮದ್ ಶಮಿ ಕಣಕ್ಕಿಳಿದಿದ್ದಾರೆ. ಕಳೆದ ಪಂದ್ಯದಲ್ಲೂ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ವಿಂಡೀಸ್ ಬೌಲಿಂಗ್ ಬಲಿಷ್ಠವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್‍ಮನ್‍ಗಳು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳಲ್ಲಿ 4 ರಲ್ಲಿ ಸೋಲುಂಡಿರುವ ವಿಂಡೀಸ್ ಬಹುತೇಕ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಇತ್ತ ಸೆಮಿಫೈನಲ್ ಹೊಸ್ತಿಲಲ್ಲಿರುವ ಕೊಹ್ಲಿ ಸೈನ್ಯ, ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಗಟ್ಟಿಮಾಡಿಕೊಳ್ಳಲು ತಂತ್ರ ರೂಪಿಸಿದೆ.

ಭಾರತದ ವಿರುದ್ಧ ಪಂದ್ಯ ಗೆದ್ದು ಮುಂದಿನ ಮೂರು ಮ್ಯಾಚ್ ಫಲಿತಾಂಶ ತಮ್ಮತ್ತ ಮಾಡಿಕೊಳ್ಳುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಳ್ಳಲು ವಿಂಡೀಸ್ ಪ್ಲಾನ್ ಮಾಡಿಕೊಂಡಿದೆ. ವಿಂಡೀಸ್ ಇಂದಿನ ಪಂದ್ಯವನ್ನ ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ.

Comments

Leave a Reply

Your email address will not be published. Required fields are marked *