ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

-ಅಂಬಿ ಇಷ್ಟದ ಮಿಠಾಯಿ ಸವಿದ ಪಕ್ಷೇತರ ಅಭ್ಯರ್ಥಿ

ಮಂಡ್ಯ: ಇಂದು ಬೆಳ್ಳಂಬೆಳಗ್ಗೆ ಮಂಡ್ಯದ ಮಾರುಕಟ್ಟೆಯಲ್ಲಿ ಸುಮಲತಾ ಅಂಬರೀಶ್ ಪ್ರಚಾರ ಆರಂಭ ಮಾಡಿದ್ದು, ಅಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಹಾಗೂ ಅಂಬಿ ಅಭಿಮಾನಿಗಳು ಪ್ರೀತಿಯಿಂದ ಪ್ರಚಾರದ ಖರ್ಚಿಗೆ ಹಣ ನೀಡಿದಷ್ಟೇ ಅಲ್ಲದೆ ಸೌತೆಕಾಯಿ, ಕಿತ್ತಳೆ ಹಣ್ಣು, ಮಿಠಾಯಿ ನೀಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ ಮಾರುಕಟ್ಟೆಯಲ್ಲಿ ಪ್ರಚಾರಕ್ಕೆ ತೆರೆಳಿದ್ದ ವೇಳೆ ಅಂಬರೀಶ್ ಅಭಿಮಾನಿಗಳು, ಸುಮಲತಾರನ್ನು ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೆ ಕೆಲ ಮಹಿಳಾ ವ್ಯಾಪಾರಿಗಳು ಸುಮಲತಾರಿಗೆ ಪ್ರಚಾರದ ಖರ್ಚಿಗೆ ಕೊಂಚ ಹಣವನ್ನು ಕೂಡ ನೀಡಿದ್ದಾರೆ. ಹಾಗೆಯೇ ವ್ಯಾಪಾರ ಮಾಡುತ್ತಿದ್ದ ನಾವು ಸಂತೋಷದಿಂದ ಹಣ ಕೊಟ್ಟಿದ್ದೇವೆ. ಅವರು ಗೆಲ್ಲಲಿ ಎಂದು ಹಣ ಕೊಟ್ಟಿದ್ದೇವೆ. ನಮಗೆ ಏನು ಮಾಡಬೇಕೋ ಅದನ್ನು ಅವರು ಗೆದ್ದ ನಂತರ ಮಾಡಲಿ. ನಮ್ಮಂಥ ಬಡವರನ್ನು ಕಾಪಾಡಲಿ ಎಂದು ಕಿರುಕಾಣಿಕೆ ನೀಡಿದ ವೃದ್ಧೆಯೊಬ್ಬರು ಹೇಳಿದರು.

ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ಚಿಕ್ಕ ಮಂಡ್ಯ ರಸ್ತೆಯಲ್ಲಿ ಇರುವ ಮಿಠಾಯಿ ಅಂಗಡಿ ಹೋಗಿ ಮಿಠಾಯಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಆದ್ದರಿಂದ ಪ್ರಚಾರದ ವೇಳೆ ಮಿಠಾಯಿ ಅಂಗಡಿ ಮಾಲೀಕ ಚಂದ್ರು, ಅಂಬಿ ಅವರ ಇಷ್ಟದ ಮಿಠಾಯಿಯನ್ನು ಸುಮಲತಾರಿಗೆ ನೀಡಿ ಖುಷಿಪಟ್ಟಿದ್ದಾರೆ.

ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ತಾವೇ ಖುದ್ದಾಗಿ ಚಂದ್ರು ಅವರ ಮಿಠಾಯಿ ಅಂಗಡಿಗೆ ಹೋಗಿ ಬೆಲ್ಲದ ಮಿಠಾಯಿ ಖರೀದಿಸಿ ತಿನ್ನುತ್ತಿದ್ದರು. ಅಲ್ಲದೆ ಅಂಬರೀಶ್‍ರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವವರು ಕೂಡ ಚಂದ್ರು ಅಂಗಡಿಯಿಂದ ಬೆಲ್ಲದ ಮಿಠಾಯಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಹೀಗಾಗಿ ಸುಮಲತಾ ಅವರು ಮಾರ್ಕೆಟ್‍ಗೆ ಬಂದ ವಿಷಯ ತಿಳಿದ ಚಂದ್ರು, ಅಭಿಮಾನದಿಂದ ಅವರಿಗೆ ಮಿಠಾಯಿ ತಂದುಕೊಟ್ಟರು. ಬಳಿಕ ಅಭಿಮಾನಿ ಪ್ರೀತಿಗೆ ಸೋತ ಸುಮಲತಾ, ಅಂಬರೀಶ್ ನೆನಪಿಗಾಗಿ ಮಾರುಕಟ್ಟೆಗೆ ಬಂದಾಗ ನಿಮ್ಮ ಅಂಗಡಿಗೆ ನಾನೇ ಬಂದು ಮಿಠಾಯಿ ತಿನ್ನುತ್ತೇನೆ ಎಂದು ಸಂತೋಷದಿಂದ ಹೇಳಿಕೊಂಡರು.

Comments

Leave a Reply

Your email address will not be published. Required fields are marked *