ಬಾಯಾರಿದಾಗ ನೀರು ಕೊಡಲಿಲ್ಲ, ಈಗ್ಯಾಕೆ ಬಂದ್ರಿ?- ಸಚಿವೆ ಗೀತಾ ಮಹದೇವಪ್ರಸಾದ್ ವಿರುದ್ಧ ಮಹಿಳೆಯರು ಕಿಡಿ

ಚಾಮರಾಜನಗರ: ಮತ ಕೇಳಲು ಹೋದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಗೀತಾಮಹದೇವಪ್ರಸಾದ್ ಅವರು ಮಹಿಳೆಯರಿಂದಲೇ ತರಾಟೆಗೆ ಒಳಗಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಹಿರಿಕಾಟಿ ಗ್ರಾಮದಲ್ಲಿ ಜರುಗಿದೆ.

ಕುಡಿಯಲು ನೀರು ಕೊಡೋಕೆ ನಿಮಗೆ ಆಗಲಿಲ್ಲ. ಈಗ ನಮ್ಮ ಗ್ರಾಮಕ್ಕೆ ಮತ ಕೇಳಲು ಯಾಕೆ ಬಂದಿದ್ದೀರಾ. ನಮಗೆ ಬಾಯಾರಿಕೆ ಆದಾಗ ನೀವು ನೀರು ಕೊಡಲಿಲ್ಲ. ನಾವು ಈಗ ನಿಮಗೆ ಮತ ನೀಡಬೇಕಾ ಎಂದು ಹಿರಿಕಾಟಿ ಗ್ರಾಮದ ಮಹಿಳೆಯರು ಸಚಿವೆ ಗೀತಾಮಹದೇವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ್ರು.

ಗ್ರಾಮದ ಪ್ರವೇಶ ದ್ವಾರದಲ್ಲೇ ಗೀತಾಮಹದೇವಪ್ರಸಾದ್ ರನ್ನು ನಿಲ್ಲಿಸಿ, ಉಪಚುನಾವಣೆಯಲ್ಲಿ ಗೆದ್ದ ನಂತರ ಇತ್ತ ನೀವು ತಲೆ ಹಾಕಿಲ್ಲ. ಇದೀಗ ಚುನಾವಣೆ ಬಂದ ಮೇಲೆ ನಮ್ಮ ಗ್ರಾಮಕ್ಕೆ ನೀವು ಬರ್ತಾ ಇದ್ದೀರಾ. ನೀರು ಕೊಡದ ನಿಮಗೆ ನಾವು ಯಾಕೆ ಮತ ಹಾಕಬೇಕು ಎಂದು ಮಹಿಳೆಯರು ಸಚಿವೆಗೆ ಪ್ರಶ್ನೆಗಳ ಸುರಿಮಳೆಗೈದರು.

ಈ ವೇಳೆ ಮಹಿಳೆಯರನ್ನು ಮನವೊಲಿಸಲು ಮುಂದಾದ ಸಚಿವೆಯ ಹಿಂಬಾಲಕನ್ನು ಸಹ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಅವರು ನೀರು ಕೊಡಲಿಲ್ಲ ಅಂದರೆ ನೀವ್ ಕೊಡ್ತೀರಾ..? ನಾವು ಅವರನ್ನು ಕೇಳ್ತಾ ಇರೋದು ನೀವು ಮಾತಾಡಬೇಡಿ ಎಂದು ಹಿಂಬಾಲಕರ ವಿರುದ್ಧ ಕಿಡಿ ಕಾರಿದ್ದಾರೆ.

Comments

Leave a Reply

Your email address will not be published. Required fields are marked *