ಸಂತಾನಹರಣ ಚಿಕಿತ್ಸೆಗಾಗಿ ಬಂದು ರಾತ್ರೋರಾತ್ರಿ ಮಗು ಬಿಟ್ಟು ಪರಾರಿ- ಅಮ್ಮನ ಕಾಣದೇ ಕಂದಮ್ಮ ಕಣ್ಣೀರು!

ಚಾಮರಾಜನಗರ: ಮೂರು ತಿಂಗಳ ಹಸುಗೂಸನ್ನು ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಜ್ಯೋತಿ ಎಂಬಾಕೆ ಮೂರು ತಿಂಗಳ ಮಗುವನ್ನು ಬಿಟ್ಟು ಪರಾರಿಯಾದ ಮಹಿಳೆ. ಮೂಲತಃ ನಂಜನಗೂಡು ನಿವಾಸಿಯಾಗಿರೋ ಜ್ಯೋತಿ ಹಾಗೂ ಪತಿ ಸೇರಿದಂತೆ ಆಕೆಯ ತಾಯಿ ಬುಧವಾರ ರಾತ್ರಿ ಜಿಲ್ಲಾಸ್ಪತೆಗೆ ಆಗಮಿಸಿದ್ದರು. ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ಆಗಮಿಸಿದ್ದ ಜ್ಯೋತಿಯನ್ನು ಆಸ್ಪತೆಗೆ ದಾಖಲಿಸಿಕೊಳ್ಳಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ರಾತ್ರೋರಾತ್ರಿ ನಾಪತ್ತೆಯಾಗಿದ್ದಾಳೆ.

ಇದೀಗ ಮಗು ತಾಯಿಯನ್ನು ಕಾಣದೆ ರೋಧಿಸತೊಡಗಿದ್ದು, ಈ ದೃಶ್ಯ ಎಂತಹವರ ಮನವನ್ನೂ ಕಲಕುವಂತಿದೆ. ಜ್ಯೋತಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಆಕೆಯ ತಾಯಿ ಹಾಗು ಪತಿ ಸೇರಿದಂತೆ ಪೋಷಕರು ಆಘಾತಕ್ಕೊಳಗಾಗಿ ಕಣ್ಣೀರುಡುತ್ತಿದ್ದಾರೆ.

ಅಂದಹಾಗೇ ಜ್ಯೋತಿಗೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಎರಡು ವರ್ಷಗಳ ಹಿಂದೆ ದಂಪತಿಗೆ ಹೆಣ್ಣು ಮಗುವಾಗಿದ್ದು, ಇದೀಗ ಮೂರು ತಿಂಗಳ ಹಿಂದೆಯಷ್ಟೇ ಮತ್ತೊಂದು ಸಹ ಹೆಣ್ಣು ಮಗು ಜನಿಸಿದೆ. ಹೀಗಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಂಪತಿ ನಿರ್ಧರಿಸಿ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ರಾತ್ರಿ ಆಸ್ಪತ್ರೆಗೆ ಆಗಮಿಸಿದ ಬಳಿಕ ಜ್ಯೋತಿ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಸ್ಥಳದಿಂದ ಹೊರ ನಡೆದಿದ್ದಾಳೆ.

ಸದ್ಯ ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗು ಆಕೆಯ ಪತಿ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *