ಅವಳು ಸೂಸೈಡ್ ಮಾಡ್ತೀನಿ ಅಂದ್ಳು, ಇವನು ಕತ್ತು ಹಿಸುಕಿ ಸಾಯಿಸ್ದ!

ಮುಂಬೈ: ವಸ್ತ್ರ ವ್ಯಾಪಾರದಲ್ಲಿ ಬಂದ ಲಾಭದ ಹಂಚಿಕೆ ವಿಚಾರದಲ್ಲಿ ಆರಂಭವಾದ ಜಗಳ ಗೆಳತಿಯ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಸೆಂಟ್ರಲ್ ಮುಂಬೈಯ ಕಾಲಾಚೌಕಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲಾಭಾಂಶ ಕೊಡಲ್ಲ ಎಂದಿದ್ದಕ್ಕೆ ಕೊಲೆ!: ಮುಂಬೈನ ಇರ್ಷಾದ್ ಖುರೇಷಿ ಹಾಗೂ ಫರ್ಹಾನಾ ಸುಹೈಲ್ ಶೇಖ್ ಇಬ್ಬರೂ ಗೆಳೆಯರಾಗಿದ್ದರು. ಹೀಗಾಗಿ ಫರ್ಹಾನಾ ವಸ್ತ್ರ ಉದ್ಯಮ ಶುರು ಮಾಡಿದಾಗ ಇರ್ಷಾದ್ ಕೂಡಾ ಹಣ ಹೂಡಿಕೆ ಮಾಡಿದ್ದ. ಶುಕ್ರವಾರ ಬೆಳಗ್ಗೆ ಇಬ್ಬರೂ ಮುಂಬೈನ ಹೋಟೆಲೊಂದರಲ್ಲಿ ಲಾಭ ಹಂಚಿಕೆ ಮಾತುಕತೆ ನಡೆಸಲು ಬಂದಿದ್ದರು.

ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಮನೆಯಿಂದ ಹೊರಟ ಫರ್ಹಾನಾ ನೇರವಾಗಿ ಹೋಟೆಲ್ ಗೆ ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಯಾವುದೇ ಕಾರಣಕ್ಕೂ ನಾನು ನಿನಗೆ ಲಾಭದಲ್ಲಿ ಪಾಲು ನೀಡಲ್ಲ ಎಂದು ಫರ್ಹಾನಾ ಹೇಳಿದ್ದಾಳೆ.

ಮಾತಿನ ಭರದಲ್ಲಿ ಸ್ಕಾರ್ಫ್ ಧರಿಸಿದ್ದ ಫರ್ಹಾನಾ ನಾನು ಈ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾಳೆ. ತಕ್ಷಣ ಮುಂದೆ ಬಂದ ಇರ್ಷಾದ್ ಆಕೆಯ ಕತ್ತಿನಲ್ಲಿದ್ದ ಸ್ಕಾರ್ಫ್ ಎರಡೂ ಕೈಯಲ್ಲಿ ಹಿಡಿದುಕೊಂಡು ಬಿಗಿ ಮಾಡುತ್ತಾನೆ. ಇದರಿಂದಾಗಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಫರ್ಹಾನಾ ದೇಹದಲ್ಲಿ ಚಲನವಲನ ನಿಂತಿದ್ದನ್ನು ಗಮನಿಸಿದ ಇರ್ಷಾದ್ ತಕ್ಷಣ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಏನೇನಾನಾಯ್ತು ಎಂದೆಲ್ಲಾ ವಿವರಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ ಎಂದು ಕಾಲಾಚೌಕಿ ಇನ್ಸ್ ಪೆಕ್ಟರ್ ದಿಲೀಪ್ ಉಗಳೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *