ಅತ್ಯಾಚಾರಕ್ಕೆ ಮುಂದಾದ ವ್ಯಕ್ತಿ – ಮಹಿಳೆಯ ಕಾಯಿಲೆ ಕೇಳಿ ತಕ್ಷಣ ಎಸ್ಕೇಪ್

ಮುಂಬೈ: ಜಾಮೀನು ಮೂಲಕ ಜೈಲಿನಿಂದ ಹೊರಬಂದಿದ್ದ ಆರೋಪಿಯೊಬ್ಬ 29 ವರ್ಷದ ವಿಧವೆ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ರಾಜ್‍ನಗರದಲ್ಲಿ ನಡೆದಿದೆ.

ಮಹಿಳೆ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ತಾನು ಎಚ್‍ಐವಿ ಪಾಸಿಟಿವ್ ಎಂದು ಹೇಳಿಕೊಂಡಿದ್ದಾರೆ. ಇದರಿಂದ ತನಗೂ ರೋಗ ಬರಬಹುದೆಂದು ಗಾಬರಿಯಿಂದ ತಕ್ಷಣ ಜಾಗ ಖಾಲಿ ಮಾಡಿದ್ದಾನೆ. ಸದ್ಯಕ್ಕೆ ಎರಡು ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಜ್‍ನಗರದ ಮುಕುಂದ್‍ವಾಡಿ ಪ್ರದೇಶದ ನಿವಾಸಿ ಕಿಶೋರ್ ವಿಲಾಸ್ ಅವ್ಹಾದ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತನ್ನ ತಂದೆಯನ್ನೇ ಕೊಲೆ ಮಾಡಿರುವ ಆರೋಪದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಇತ್ತೀಚೆಗೆ ಜಾಮೀನು ಮೂಲಕ ಹೊರ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ?
ಮಹಿಳೆ ಎಂಐಡಿಸಿ ವಾಲುಜ್ ನಿವಾಸಿಯಾಗಿದ್ದು, ತನ್ನ 7 ವರ್ಷದ ಮಗಳೊಂದಿಗೆ ಶಾಪಿಂಗ್ ಮಾಡಲು ಮಾರ್ಚ್ 25ರ ರಾತ್ರಿ ನಗರಕ್ಕೆ ಬಂದಿದ್ದರು. ನಂತರ ಶಾಪಿಂಗ್ ಮುಗಿಸಿ ಮನೆಗೆ ವಾಪಸ್ಸು ಹೋಗಲು ಸಿದ್ಧರಾದರು. ಈ ವೇಳೆ ತನ್ನ ಬಳಿಕ ಕೇವಲ 10 ರೂ. ಮಾತ್ರ ಉಳಿದಿದೆ ಎಂಬುದು ಗೊತ್ತಾಗಿದೆ. ಆಗ ಮಹಿಳೆ ತಾನು ಹೊರಡುವ ಆಟೋ ರಿಕ್ಷಾದಲ್ಲಿ ಸೀಟ್ ಹಂಚಿಕೊಳ್ಳುವಂತೆ ಸ್ಥಳದಲ್ಲಿದ್ದವರನ್ನು ಕೇಳಿಕೊಂಡಿದ್ದಾರೆ. ಆದರೆ ಮಹಿಳೆಗೆ ಸಹಾಯ ಮಾಡಲು ಯಾರು ಬಂದಿಲ್ಲ. ಕೊನೆಗೆ ದರ್ಗಾವೊಂದರ ಬಳಿ ಯಾರನ್ನಾದರೂ ಲಿಫ್ಟ್ ಕೇಳಿಕೊಂಡು ಹೋಗೋಣ ಎಂದು ನಿಂತುಕೊಂಡಿದ್ದರು.

ಇದೇ ವೇಳೆ ಆರೋಪಿ ಕಿಶೋರ್ ಬೈಕಿನಲ್ಲಿ ಬಂದು ಮಹಿಳೆ ಮತ್ತು ಮಗಳನ್ನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಬೈಕ್ ಹತ್ತಿಸಿಕೊಂಡಿದ್ದನು. ಆದರೆ ಆರೋಪಿ ಬೇರೆ ಮಾರ್ಗವಾಗಿ ರಾಜ್‍ನಗರಕ್ಕೆ ಅವರನ್ನು ಕರೆದುಕೊಂಡು ಹೋಗುತ್ತಿದ್ದು, ಬಳಿಕ ಯಾರು ಇಲ್ಲದ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಆಯುಧವನ್ನು ತೋರಿಸಿ ಬೆದರಿಸಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ತಕ್ಷಣ ಮಹಿಳೆಗೆ ಏನು ಮಾಡುವುದು ಎಂದು ಹೊಳೆಯಲಿಲ್ಲ. ಆದರೂ ಬುದ್ಧಿವಂತಿಕೆಯಿಂದ ಮಹಿಳೆ ತನಗೆ ಎಚ್‍ಐವಿ ಪಾಸಿಟಿವ್ ರೋಗ ಇದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ತಕ್ಷಣ ಆರೋಪಿ ಮಹಿಳೆಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಮಹಿಳೆ ಆರೋಪಿಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ಕಿಡ್ನಾಪ್ ಮತ್ತು ಕಿರುಕುಳ ನೀಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಮೊದಲಿಗೆ ಆರೋಪಿಯನ್ನು ಯಾರು ಎಂದು ತಿಳಿಯಲು ಸಾಧ್ಯವಾಗಿಲ್ಲ. ನಂತರ ಮಹಿಳೆ ಹೇಳಿದ ಆಧಾರದ ಮೇರೆಗೆ ಆತನ ಸ್ಕೆಚ್ ರೆಡಿಮಾಡಲಾಗಿತ್ತು. ಎರಡು ದಿನಗಳ ಬಳಿಕ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಶ್ರದ್ಧಾ ವೇದಾಂಡೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *