ನಮ್ಮತ್ತ ಬೆರಳು ತೋರಿದ್ರೆ ಆ ಬೆರಳನ್ನೇ ಮುರಿಯುತ್ತೇವೆ: ಬಿಜೆಪಿ ಅಭ್ಯರ್ಥಿ

ಲಕ್ನೋ: ನಮ್ಮತ್ತ ಬೆರಳು ತೋರಿಸಿದವರ ಬೆರಳನ್ನು ಮುರಿಯುತ್ತೇವೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ ಶಂಕರ್ ಕಥೇರಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಟಾವಾ ಕ್ಷೇತ್ರದಲ್ಲಿ ಗುರುವಾರ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ನಮ್ಮ ವಿರುದ್ಧ ಯಾರೂ ಬೆರಳು ತೋರಿಸುವಂತಿಲ್ಲ. ಒಂದು ವೇಳೆ ತೋರಿಸಿದರೆ ಆ ಬೆರಳನ್ನೇ ಮುರಿಯುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಎಸ್‍ಪಿ ನಾಯಕಿ ಮಾಯಾವತಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಪ್ರಸ್ತಾಪಿಸಿದ ರಾಮ್ ಶಂಕರ್ ಕ್ಯಾಥೇರಿಯಾ, ಮಾಯಾವತಿ ಅವರು ನನ್ನ ಮೇಲೆ ಅನೇಕ ಪ್ರಕರಣಗಳನ್ನು ಹೇರಿದ್ದರು. ಆದರೆ ನಾನು ಹೋರಾಡುತ್ತಲೇ ಬಂದೆ. ಹೀಗಾಗಿ ನನ್ನನ್ನು ಜೈಲಿಗೆ ಕಳುಹಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದರು.

ಮಾಯಾವತಿ ಅವರು ನನ್ನ ವಿರುದ್ಧ 29 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದಕ್ಕೆಲ್ಲ ನಾನು ಹೆದರಲಿಲ್ಲ. ಪೂರ್ಣ ಶಕ್ತಿ ಹಾಗೂ ಆತ್ಮವಿಶ್ವಾಸದಿಂದ ನಾನು ಹೋರಾಡುತ್ತಿರುವೆ. ನಮ್ಮ ವಿರುದ್ಧ ನಡೆದುಕೊಂಡರೆ ನಾವು ಹಾಗೇ ವರ್ತಿಸುತ್ತೇವೆ. ನಾನು ಎಂತಹ ಪರಿಸ್ಥಿಯಲ್ಲಿಯೂ ನಿಮ್ಮೊಂದಿಗೆ ಇರಲು ಇಚ್ಛೆಪಡುತ್ತೇನೆ ಎಂದು ಕಥೇರಿಯಾ, ಮತದಾರರಿಗೆ ತಿಳಿಸಿದರು.

ಪರಿಶಿಷ್ಠ ಜಾತಿ ಮೀಸಲು ಲೋಕಸಭಾ ಕ್ಷೇತ್ರವಾಗ ಆಗ್ರಾದಿಂದ ಕಳೆದ ಬಾರಿ ಕ್ಯಾಥೇರಿಯಾ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಆಗ್ರಾ ಟಿಕೆಟನ್ನು ಉತ್ತರ ಪ್ರದೇಶದ ಸಚಿವ ಸಿಂಗ್ ಬಾಗೇಲ್‍ಗೆ ನೀಡಲಾಗಿದೆ. ಹೀಗಾಗಿ ಕ್ಯಾಥೇರಿಯಾ ಅವರು ಇಟಾವಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *