ಪ್ರಿಯಕರನ ಜೊತೆ ಸೇರಲು ಮದ್ವೆಯಾಗಿ 11ನೇ ದಿನಕ್ಕೆ ಪತಿಯನ್ನೇ ಕೊಂದ್ಳು!

ಚಿಕ್ಕಮಗಳೂರು: ಮದುವೆಯಾದ 11ನೇ ದಿನಕ್ಕೆ ಪತ್ನಿಯೇ ಪತಿಗೆ ಮದ್ಯದಲ್ಲಿ ಇಲಿ ಪಾಶಾಣ (ಪೇಸ್ಟ್) ಹಾಕಿ ಗಂಡನನ್ನು ಕೊಲೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೆಮ್ಮಕ್ಕಿ ಗ್ರಾಮದಲ್ಲಿ ನಡೆದಿದೆ.

ವಿನುತ ತನ್ನ ಪತಿ ಸುರೇಶ್‍ನನ್ನು ಕೊಲೆ ಮಾಡಿದ ಆರೋಪಿ. ಸುರೇಶ್ ಹಾಗೂ ವಿನುತಗೆ ಮೇ 7ರಂದು ಮದುವೆಯಾಗಿತ್ತು. ಆದರೆ ಮೂರು ದಿನಗಳ ಹಿಂದೆ ವಿನುತ ಪತಿ ಸುರೇಶ್‍ಗೆ ಮದ್ಯದಲ್ಲಿ ಇಲಿ ಪಾಶಾಣ ಹಾಕಿ ಕುಡಿಸಿದ್ದಾಳೆ. ಬಳಿಕ ತೀವ್ರ ಅಸ್ವಸ್ಥರಾಗಿದ್ದ ಸುರೇಶ್‍ನನ್ನ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಸುರೇಶ್ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ.

ಕೊಲೆ ಮಾಡಿದ್ದು ಯಾಕೆ?
ವಿನುತಾಳದ್ದು ಮೊದಲೇ ಪ್ರೇಮ ಪ್ರಸಂಗವಿತ್ತು ಎಂದು ಮೃತ ಸುರೇಶ್ ಸಂಬಂಧಿಕರು ಆರೋಪಿಸಿದ್ದಾರೆ. ಎಂಗೇಜ್‍ಮೆಂಟ್ ಆದ ಮೇಲೂ ವಿನುತ ಆಕೆಯ ಪ್ರಿಯಕರನೊಂದಿಗೆ ಹೋಗಿದ್ದಳು. ಆಕೆಯ ಮನೆಯವರು ಆಕೆಯನ್ನು ವಾಪಸ್ ಕರೆತಂದು ಬಲವಂತವಾಗಿ ಸುರೇಶ್ ಜೊತೆ ಮದುವೆ ಮಾಡಿದ್ದರು ಎಂದು ಸುರೇಶ್ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಸುರೇಶ್ ಕುಟುಂಬದವರು ಕಳಸ ಠಾಣೆಯಲ್ಲಿ ವಿನುತ ವಿರುದ್ಧ ದೂರು ನೀಡಿದ್ದಾರೆ. ಇನ್ನೂ ವಿನುತ ಮನೆಯವರು ಕೂಡ ಸುರೇಶ್ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಿಗೆ ಪ್ರತಿ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *