ಎರಡು ಸಲ ಎಚ್ಚರಿಕೆ ಕೊಟ್ರು ಮಾತು ಕೇಳದ ಪತಿಯನ್ನ ಕೊಂದೇ ಬಿಟ್ಳು!

ಕಲಬುರಗಿ: ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯೇ ತನ್ನ ಪತಿಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರ್ ಗ್ರಾಮದಲ್ಲಿ ನಡೆದಿದೆ.

64 ವರ್ಷದ ರಾಜೇಂದ್ರ ಗೌಡ ಎಂಬಾತನೇ ಪತ್ನಿಯಿಂದ ಕೊಲೆಯಾದ ದುರ್ದೈವಿ. ರಾಜೇಂದ್ರ ಗೌಡ ಖಾಸಗಿ ಕಂಪನಿಯ ನಿವೃತ್ತ ನೌಕರ. ಭಾನುವಾರ ರಾತ್ರಿ ಪತ್ನಿ ರಾಜೇಶ್ವರಿ ಪತಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾಳೆ.

ಏನಿದು ಪ್ರಕರಣ?:
ನಿವೃತ್ತ ನೌಕರನಾಗಿರುವ ರಾಜೇಂದ್ರ ಪ್ರತಿ ನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ಕುಡಿತದ ವಿಚಾರಕ್ಕಾಗಿ ಇಬ್ಬರ ನಡುವೆ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿದ್ದವು. ಈ ಮೊದಲು ಕುಡಿತ ಬಿಡಬೇಕೆಂದು ಪತ್ನಿ ರಾಜೇಶ್ವರಿ ಎರಡು ಬಾರಿ ಎಚ್ಚರಿಕೆ ನೀಡಿದ್ದಳು. ಪತ್ನಿಯ ಮಾತು ಕೇಳದ ರಾಜೇಂದ್ರ ಭಾನುವಾರ ಸಹ ಮನೆಗೆ ಮದ್ಯ ಸೇವಿಸಿ ಬಂದು ಜಗಳ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಹನೆ ಕಳೆದುಕೊಂಡ ರಾಜೇಶ್ವರಿ ಹಗ್ಗದಿಂದ ಪತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ.

ಕೊಲೆಯ ಬಳಿಕ ಹೊರ ಬಂದ ರಾಜೇಶ್ವರಿ ತಾನೇ ಗಂಡನನ್ನು ಕೊಲೆ ಮಾಡಿದ್ದೇನೆ ಎಂದು ಸ್ಥಳೀಯರ ಮುಂದೆ ಹೇಳಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರ ಮುಂದೆಯೂ ತಾನೇ ಕೊಲೆ ಮಾಡಿರುವುದಾಗಿ ಅಂತಾ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆರೋಪಿ ರಾಜೇಶ್ವರಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ರಾಜೇಂದ್ರ ಕೊಲೆಗೆ ರಾಜೇಶ್ವರಿ ಜೊತೆ ಬೇರೆ ಯಾರಾದರೂ ಕೈ ಜೋಡಿಸಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜೇಂದ್ರ ಮತ್ತು ರಾಜೇಶ್ವರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ವೇಳೆ ಮಕ್ಕಳು ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *