ಪತ್ನಿಯನ್ನು ಕೊಡಲಿಯಿಂದ ಕೊಂದ – ರೊಚ್ಚಿಗೆದ್ದು ಪತಿಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

ಲಕ್ನೋ: ಪತ್ನಿಯನ್ನು ಕೊಂದು ಪರಾರಿಯಾಗುತ್ತಿದ್ದಾಗ 40 ವರ್ಷದ ಪತಿಯನ್ನು ಹಿಡಿದು ಸ್ಥಳೀಯರು ಥಳಿಸಿದ್ದು ವ್ಯಕ್ತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಅಳಿಯಂದಿರ ಮನೆಯಲ್ಲಿದ್ದ ಪತ್ನಿ ಅಫ್ಸಾರಿ(35) ಅವರನ್ನು ಮನೆಗೆ ಕರೆದೊಯ್ಯಲು ನಜೀರ್ ಖುರೇಷಿ ಘಾಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿಮೌರ್ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ಸಣ್ಣ ಪುಟ್ಟ ವಿಷಯಕ್ಕೆ ವಾಗ್ವಾದ ನಡೆದಿದೆ. ಆಗ ಪತಿ ಕೊಡಲಿಯಿಂದ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಎಸ್‍ಪಿ ರಮೇಶ್ ಮಾಹಿತಿ ನೀಡಿದ್ದಾರೆ.

ವಾಗ್ವಾದದ ವೇಳೆ ಖುರೇಷಿ ತನ್ನ ಹೆಂಡತಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ, ಸ್ಥಳದಲ್ಲೇ ಕೊಂದು ಹಾಕಿದ್ದಾನೆ. ಅಫ್ಸಾರಿಯನ್ನು ಬಿಡಿಸಿಕೊಳ್ಳುವ ವೇಳೆ ಅವರ ತಾಯಿ ಹಾಗೂ ಸಹೋದರಿಗೂ ಸಹ ಗಾಯಗಳಾಗಿದ್ದವು. ಈ ವೇಳೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಸಹ ಆತ ಬಿಟ್ಟಿಲ್ಲ. ಕೊಲೆ ಮಾಡಿ ಪಲಾಯನ ಮಾಡುತ್ತಿದ್ದ ಖುರೇಷಿಯನ್ನು ಸ್ಥಳೀಯರು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರು ಕೋಲು ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖುರೇಷಿ ಮೇಲೆ ಹಲ್ಲೆ ಮಾಡಿದ ಸ್ಥಳೀಯರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.

Comments

Leave a Reply

Your email address will not be published. Required fields are marked *