ಹೆಂಡ್ತಿ ಸುಂದರವಾಗಿದ್ದು ತಪ್ಪಾಯ್ತು- ಪತಿಯ ಕಿರುಕುಳಕ್ಕೆ ಹೋಯ್ತು ಜೀವ

ಬೆಂಗಳೂರು: ಅನುಮಾನಾಸ್ಪದವಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಬಳಿಯ ಮಾದಪ್ಪನಹಳ್ಳಿಯಲ್ಲಿ ನಡೆದಿದೆ.

ಜಯಶ್ರೀ ಸಾವನ್ನಪ್ಪಿದ ಗೃಹಿಣಿ. ಮಾದಪ್ಪನಹಳ್ಳಿಯ ಸುಬ್ರಮಣಿ ಎರಡು ವರ್ಷಗಳ ಹಿಂದೆ ಹೊಸಕೋಟೆಯ ಜಯಶ್ರೀಯನ್ನು ಮದುವೆ ಆಗಿದ್ದನು. ಮದುವೆ ಮುಂಚೆ ಪತ್ನಿಯ ರೂಪಕ್ಕೆ ಮನಸೋತಿದ್ದ ಸುಬ್ರಮಣಿ ಹೆಂಡತಿಯನ್ನು ಅನುಮಾನಿಸ ತೊಡಗಿದ್ದನು. ಪತ್ನಿ ಸುಂದರವಾಗಿದ್ದರಿಂದಲೇ ಅನುಮಾನಿಸುತ್ತಿದ್ದ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ನಾನು ಸಿನಿಮಾ ಮಾಡಬೇಕು. ಹಾಗಾಗಿ ತವರು ಮನೆಯಿಂದ ಹಣ ತರುವಂತೆ ವರದಕ್ಷಿಣೆ ಕಿರುಕುಳ ಸಹ ನೀಡುತ್ತಿದ್ದನು.

ದೇವಸ್ಥಾನಕ್ಕೆ ತೆರಳಿದ್ರೆ ತಾನು ಸ್ಪೆಷಲ್ ಪ್ರವೇಶ ಪಡೆದು, ಪತ್ನಿಯನ್ನು ಸಾಮಾನ್ಯ ಸಾಲಿನಲ್ಲಿ ನಿಲ್ಲಿಸಿ ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದನು. ಹೆಜ್ಜೆ ಹೆಜ್ಜೆಗೂ ಪತ್ನಿಯನ್ನು ಅನುಮಾನಿಸುತ್ತಿದ್ದ ವಿಷಯವನ್ನು ತಿಳಿದು ಕುಟುಂಬಸ್ಥರು ಪಂಚಾಯ್ತಿ ನಡೆಸಿ ತಿಳಿ ಹೇಳಿದ್ದರು. ಆದರೂ ಸುಬ್ರಮಣಿ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಶನಿವಾರ ಪೋಷಕರಿಗೆ ಕರೆ ಮಾಡಿದ್ದ ಜಯಶ್ರೀ ತನ್ನನ್ನು ಕರೆದುಕೊಂಡು ಹೋಗುವಂತೆ ಕಣ್ಣೀರಿಟ್ಟಿದ್ದರು.

ಪೋಷಕರು ಬರೋವಷ್ಟರಲ್ಲಿಯೇ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸುಬ್ರಮಣಿ ಹೇಳುತ್ತಿದ್ದಾನೆ. ಇತ್ತ ಜಯಶ್ರೀ ಪೋಷಕರು, ನೀನೇ ಹೊಡೆದು ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದೀಯಾ ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *