ಹೆಂಡ್ತಿ ಇದ್ರೂ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸ್ರು ಮುದ್ರಣ

– ಮನನೊಂದ ಪತ್ನಿ ಆತ್ಮಹತ್ಯೆಗೆ ಯತ್ನ

ನೆಲಮಂಗಲ: ಪತ್ನಿ ಇದ್ದರೂ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸರು ಮುದ್ರಣ. ಮನನೊಂದ ಪತ್ನಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊರವಲಯ ನೆಲಮಂಗಲ ಸಮೀಪದ ಕುದುರೆಗೆರೆ ಗ್ರಾಮದಲ್ಲಿ ನಡೆದಿದೆ.

ಅನುಸೂಯ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತಿದ್ದಾರೆ. ಇತ್ತ ಪತಿ ಸತೀಶ್ ಮೇಲೆ ಬೇರೆ ಮಹಿಳೆಯ ಹೆಸರು ಮುದ್ರಣ ಮಾಡಿರುವ ಆರೋಪ ಇದ್ದು, ಇಂದು ಗೃಹ ಪ್ರವೇಶದ ಮನೆಗೆ ಅನುಸೂಯ ಸಂಬಂಧಿಗಳು ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

20 ವರ್ಷದ ಹಿಂದೆ ಅನುಸೂಯ ಮತ್ತು ಸತೀಶ್ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸರು ಮುದ್ರಣವಾಗಿದ್ದರಿಂದ ಮನನೊಂದ ಪತ್ನಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಚಾರ ತಿಳಿದ ಅನುಸೂಯ ಕುಟುಂಬಸ್ಥರು ಮನೆಗೆ ನುಗ್ಗುತಿದ್ದಂತೆ ಸತೀಶ್ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಪತ್ನಿ ಅನುಸೂಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದರೆ, ಇತ್ತ ಪತಿಯ ಮನೆಯಲ್ಲಿ ಭಾರೀ ಭೋಜನ ವ್ಯವಸ್ಥೆಯನ್ನು ಕಂಡು ಕುಟುಂಬಸ್ಥರು ಗರಂ ಆಗಿದ್ದಾರೆ.

ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಮಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *