ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

ಬೆಂಗಳೂರು: ರಾಜ್ಯದ ಪವರ್ ಫುಲ್ ಮಿನಿಸ್ಟರ್ ಅಂತಾನೇ ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಏನಾಯಿತು? ಮತ್ತು ಯಾವ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗ್ತಾಯಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಲಭ್ಯವಾಗಿವೆ.

ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ವೇಳೆ ವಶಪಡಿಸಿಕೊಂಡ ಬಹುತೇಕ ಆಸ್ತಿ ಪತ್ರಗಳಿಗೆ ಸರಿಯಾದ ದಾಖಲೆಗಳಿಲ್ಲ. ಸಚಿವರು ದಾಖಲೆಯಿಲ್ಲದೇ ಹಲವು ಕಡೆ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಚೀಟಿಗಳಲ್ಲಿ ಬರೆದುಕೊಳ್ಳಲಾಗಿತ್ತು ಮತ್ತು ಈ ಎಲ್ಲ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲಿ ಸಚಿವರು ತೆರಿಗೆಯನ್ನು ಪಾವತಿ ಮಾಡಿಲ್ಲ. ದಾಳಿ ಸಮಯದಲ್ಲಿ ಸಚಿವರು ಕೆಲ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ.

ಐಟಿ ದಾಳಿ ವೇಳೆ 5 ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಟ್ಯಾಕ್ಸ್ ಕಟ್ಟದೆ ಇರುವುದು ಬೆಳಕಿಗೆ ಬಂದಿದೆ. ಇನ್ನೂ ಹಲವು ಕಂಪೆನಿಗಳ ಜೊತೆ ಡಿ.ಕೆ.ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದು, ಅರ್ಧ ಹಣವನ್ನು ಚೆಕ್ ಮೂಲಕ ಮತ್ತು ಇನ್ನರ್ಧ ಹಣವನ್ನು ಕ್ಯಾಶ್ ಮೂಲಕ ಪಡೆದಿದ್ದಾರೆ. ಕ್ಯಾಶ್ ನಲ್ಲಿ ಪಡೆದ ಹಣಕ್ಕೆ ಸಚಿವರು ತೆರಿಗೆ ಪಾವತಿ ಮಾಡಿಲ್ಲ. ಈ ರೀತಿಯ ವ್ಯವಹಾರದಲ್ಲಿ ಒಂದು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು 7 ಕೋಟಿ ರೂಪಾಯಿಗೂ ಹೆಚ್ಚಿನ ಹಣಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

ಡಿ.ಕೆ ಶಿವಕುಮಾರ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಜವಬ್ದಾರಿಯುತ ಸಚಿವರಾಗಿ ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಿದ್ದಾರೆ. ಕಾನೂನಿನ ಬಗ್ಗೆ ಅರಿವಿದ್ರೂ ಮೋಸ ಮಾಡಿದ್ದು, ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಐಟಿ ಇಲಾಖೆ ಕೋರ್ಟ್ ಗೆ ಮನವಿ ಮಾಡಿದೆ.

Comments

Leave a Reply

Your email address will not be published. Required fields are marked *