ಸಿಎಂ ‘ಈ ಕಾರಣಕ್ಕೆ’ ಬಿಎಸ್‍ವೈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ವಂತೆ!

ಬೆಂಗಳೂರು: ಬಿಜಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೆಚ್ಚು ಸುಳ್ಳು ಹೇಳ್ತಾರೆ, ಆದ್ದರಿಂದ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದನ್ನು ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಭಾರಿ ಮಳೆಯಿಂದ ಉಂಟಾಗುತ್ತಿರುವ ಹಾನಿಗೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಬಿಎಸ್‍ವೈ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಈ ಮೇಲಿನಂತೆ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಯ ಬಗ್ಗೆ ಬಿಜೆಪಿ ಮಾಡುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ಸಾಕಷ್ಟು ಸಚಿವರ ಮೇಲೆ ಆರೋಪಗಳಿವೆ. ಕೋರ್ಟ್‍ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಮೊದಲು ಅವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅನುಭವ ಮಂಟಪ ನಿರ್ಮಾಣದ ಬಗ್ಗೆ ವರದಿ ನೀಡಿದ್ದಾರೆ. ವರದಿಯನ್ನು ಪರಿಶೀಲನೆ ಮಾಡಿ ಅನುಷ್ಠಾನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೀವಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈತ್ರಿ ಬಗ್ಗೆ ಚರ್ಚಿಸಿಲ್ಲ: ಬಿಬಿಎಂಪಿ ಮೈತ್ರಿ ಮುಂದುವರಿಕೆ ಬಗ್ಗೆ ಇನ್ನು ನಾವು ಯಾರ ಬಳಿ ಮಾತಾಡಿಲ್ಲ. ಆದರೆ ಒಮ್ಮೆ ರೋಷನ್ ಬೇಗ್ ದೇವೇಗೌಡರ ಜೊತೆ ಮಾತನಾಡಿದ್ದಾರೆ ಅಷ್ಟೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇಯರ್ ಸ್ಥಾನವನ್ನು ಜೆಡಿಎಸ್‍ಗೆ ನೀಡಿದರೆ ಮಾತ್ರ ಮೈತ್ರಿ ಮುಂದುವರೆಸುವ ವಿಚಾರವಾಗಿ ಪ್ರಶ್ನಿಸಿದ ಮಾಧ್ಯಮದ ಮೇಲೆ ಗರಂ ಆದ ಸಿಎಂ, ನೀವು ಯಾಕೆ ಅವರ ಪರ ವಕಾಲತ್ತು ವಹಿಸಿಕೊಂಡು ಬರುತ್ತೀರಾ ಎಂದರು.

ನಂತರ ಮಾಧ್ಯಮದವರು ಕುಮಾರಸ್ವಾಮಿ ಅವರೇ ಈ ವಿಚಾರ ತಿಳಿಸಿದ್ದಾರೆ ಎಂದಾಗ ಶಾಂತರಾದ ಸಿಎಂ, ನಾವು ಇದುವರೆಗೂ ಈ ಕುರಿತು ಚರ್ಚೆ ನಡೆಸಿಲ್ಲ. ಚರ್ಚೆ ನಡೆದ ಬಳಿಕ ಎಲ್ಲಾ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *