ದೇವೇಗೌಡ್ರ ಕುಟುಂಬದ ಕಣ್ಣೀರ ಕಹಾನಿ ಯಾತಕ್ಕೆ- ಈಶ್ವರಪ್ಪ ಪ್ರಶ್ನೆ

ಬಾಗಲಕೋಟೆ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬದಲ್ಲಿ ಗೌಡರು ಸೇರಿದಂತೆ, ಸಿಎಂ ಕುಮಾರಸ್ವಾಮಿ, ರೇವಣ್ಣ ಏತಕ್ಕಾಗಿ ಕಣ್ಣೀರು ಹಾಕ್ತಾರೆ ಎಂದು ಸ್ಪಷ್ಟಪಡಿಸಲಿ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಗೌಡರ ಕುಟುಂಬಕ್ಕೆ ಪ್ರಶ್ನೆ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್, ಇವ್ರೆಲ್ಲ ಪುಲ್ವಾಮಾ ಸೈನಿಕರ ಸಾವಿಗಾಗಿ ಕಣ್ಣೀರು ಹಾಕಿದ್ರಾ?, ರಾಜ್ಯದಲ್ಲಿ ಬರಕ್ಕೆ ಸಿಕ್ಕಿ ಕಂಗಾಲಾಗಿರೋ ರೈತರಿಗಾಗಿ ಕಣ್ಣೀರು ಬಂತಾ? ಅಥವಾ ಐಟಿ ದಾಳಿಯಲ್ಲಿ ಸಿಕ್ಕಿಹಾಕಿಕೊಂಡ್ರು ಅಂತ ಕಣ್ಣೀರು ಬಂತಾ? ಹೀಗೆ ಯಾವ ವಿಷಯಕ್ಕೆ ಕಣ್ಣೀರು ಹಾಕ್ತಾರೆ ಎಂದು ದೇವೇಗೌಡರೇ ಸ್ಪಷ್ಟಪಡಿಸಬೇಕು ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದರು.

ನಮ್ಮದು ಕುಟುಂಬ ರಾಜಕಾರಣ ಅಲ್ಲ ಎನ್ನುವ ದೇವೇಗೌಡರು, ಕುಟುಂಬ ರಾಜಕಾರಣದ ಅರ್ಥ ಏನು ಎಂದು ಹೇಳಲಿ ಎಂದು ಆಗ್ರಹಿಸಿದರು. ದೇವೇಗೌಡರು, ಇಬ್ಬರು ಮೊಮ್ಮಕ್ಕಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಒಬ್ಬ ಮಗ ಸಿಎಂ, ಇನ್ನೊಬ್ಬ ಮಗ ಲೋಕೋಪಯೋಗಿ ಸಚಿವ, ಸೊಸೆ ಶಾಸಕಿ ಆಗಿದ್ದಾರೆ. ಇನ್ನೂ ಯಾರು ಯಾರನ್ನು ಏನೇನು ಮಾಡ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.

Comments

Leave a Reply

Your email address will not be published. Required fields are marked *