ಫಿಲ್ಮ್ ಚೇಂಬರ್ ನಟ ಅನಿರುದ್ಧ ಅವರನ್ನು ಕರೆದದ್ದು ಯಾಕೆ?

ಕೆಲವೇ ಹೊತ್ತಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಅನಿರುದ್ಧ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿರ್ದೇಶಕ ಎಸ್.ನಾರಾಯಣ್, ಸಂಜೆ ವಾಣಿಜ್ಯ ಮಂಡಳಿಯವರು ಅನಿರುದ್ಧ ಅವರನ್ನು ಕರೆದಿದ್ದಾರೆ. ಅಲ್ಲಿ ಏನು ಆಗುತ್ತದೆಯೋ ನೋಡೋಣ ಎಂದು ಹೇಳಿದ್ದರು. ಆದರೆ, ಈ ವಿಚಾರಕ್ಕೂ ವಾಣಿಜ್ಯ ಮಂಡಳಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಎದುರಾಗಿದೆ. ಅನಿರುದ್ಧ ಅವರನ್ನು ದೂರ ಇಟ್ಟಿದ್ದು ಕಿರುತೆರೆ ನಿರ್ಮಾಪಕರ ಸಂಘ. ಅದಕ್ಕೂ ವಾಣಿಜ್ಯ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಆದರೂ, ಮಧ್ಯ ಪ್ರವೇಶ ಮಾಡಿದ್ದು ಅಚ್ಚರಿ ಮೂಡಿಸಿದೆ.

ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ‘ಗಲಾಟೆ ಆಗಿದ್ದು ಕಿರುತೆರೆ ನಿರ್ಮಾಪಕರ ಸಂಘಕ್ಕೂ ಮತ್ತು ಅನಿರುದ್ಧ ಅವರಿಗೂ ನಿಜ. ಆದರೆ, ಅನಿರುದ್ಧ ಅವರು ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ಎಸ್.ನಾರಾಯಣ್ ಅವರು ಸಿನಿಮಾ ರಂಗದವರು. ಅದಕ್ಕೂ ಹೆಚ್ಚಾಗಿ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸಿಕೊಡಿ ಎಂದು ಅನಿರುದ್ಧ ಮಂಡಳಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಕರೆಯಿಸಿಕೊಂಡು ಮಾತನಾಡಲಿದ್ದೇವೆ’ ಅಂದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.

ಇಂದು ಅನಿರುದ್ಧ ಅವರ ಜೊತೆ ಭಾ.ಮಾ ಹರೀಶ್ ಅವರು ಮಾತನಾಡುತ್ತಿದ್ದು, ನಾಳೆ ಕಿರುತೆರೆಯ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರೊಂದಿಗೆ ಮಾತನಾಡುತ್ತಿದ್ದಾರೆ. ಆಗಿರುವ ಸಮಸ್ಯೆಯನ್ನು ಕೇಳಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *