ಬಸ್ ಕ್ಲೀನಿಂಗ್ ವೇಳೆ ರೆಂಬೆ ಬಿದ್ದು ಕ್ಲೀನರ್ ಸಾವು

ಮೈಸೂರು: ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ ಬಸ್ ಕ್ಲೀನರ್ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯು ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು 45 ವರ್ಷದ ಮಂಚಯ್ಯ ಎಂದು ಗುರುತಿಸಲಾಗಿದೆ. ಮೃತ ಮಂಚಯ್ಯ ಎಸ್.ಎಸ್.ಟಿ ಹೆಸರಿನ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರದ ಎದುರು ವಾಹನವನ್ನು ಸ್ವಚ್ಛಗೊಳಿಸುತ್ತಾ ನಿಂತಿದ್ದರು.

ಅದೇ ವೇಳೆ ಅಲ್ಲಿಯೇ ಇದ್ದ ಹಳೆಯ ಮರದ ರೆಂಬೆಯೊಂದು ಇದ್ದಕ್ಕಿದ್ದಂತೆ ಮುರಿದು ಮಂಚಯ್ಯ ತಲೆಯ ಮೇಲೆ ಬಿದ್ದಿದೆ. ಕೂಡಲೇ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಮಂಚಯ್ಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಲಷ್ಕರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *