ದೇವ್ರು ನಂಗೆ ಸಾಕಷ್ಟು ಹಣ ನೀಡಿದ್ದಾನೆ, ಅದನ್ನ ಎಲ್ಲಿ ತಗೊಂಡು ಹೋಗ್ಲಿ: ಅಕ್ಷಯ್

ಮುಂಬೈ: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂಗೆ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂ.ಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದಾಗ, “ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾನೆ. ನಾನು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಕ್ಷಯ್ ಕುಮಾರ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ಅಸ್ಸಾಂ ಪ್ರವಾಹದ ಫೋಟೋಗಳನ್ನು ನೋಡಿ ನನಗೆ ತುಂಬಾ ದುಃಖ ಆಗುತ್ತಿತ್ತು. ಹಾಗಾಗಿ ನಾನು ಬೇರೆ ಏನೂ ಯೋಚಿಸದೇ ಹಣವನ್ನು ದಾನ ಮಾಡಿದೆ” ಎಂದು ತಿಳಿಸಿದ್ದಾರೆ.

ಅಲ್ಲದೆ ತಾಯಿಯೊಬ್ಬರು ಮಕ್ಕಳನ್ನು ಭುಜದ ಮೇಲೆ ಎತ್ತಿಕೊಂಡು ಪ್ರವಾಹದ ನೀರಿನಲ್ಲಿ ಹೋಗುತ್ತಿರುವ ಫೋಟೋ ನೋಡಿ ನನ್ನ ಮನಸ್ಸಿಗೆ ತುಂಬಾ ಪ್ರಭಾವ ಬೀರಿತ್ತು. ಅವರ ಮುಖದಲ್ಲಿ ಯಾವುದೇ ದುಃಖ ಅಥವಾ ಒತ್ತಡ ಕಾಣಿಸಲಿಲ್ಲ. ನಾನು ಪ್ರವಾಹದ ಫೋಟೋಗಳನ್ನು ನೋಡಿದಾಗ ಇದು ನನ್ನ ಪತ್ನಿಯ ಜೊತೆ ಅಥವಾ ನನ್ನ ಮಗಳ ಜೊತೆನೂ ಸಂಭವಿಸಬಹುದು ಎಂದು ಅನಿಸಿತ್ತು. ಈ ರೀತಿಯ ಫೋಟೋಗಳನ್ನು ನೋಡಿದರೆ ನನ್ನ ಮನಸ್ಸು ಚುಚ್ಚುತ್ತದೆ. ಹಾಗಾಗಿ ನಾನು ಸಹಾಯಧನ ನೀಡಿದೆ ಎಂದು ಅಕ್ಷಯ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನಾನು ಇದೇ ರೀತಿಯ ಪ್ರಾಣಿಗಳ ಫೋಟೋವನ್ನು ಕೂಡ ನೋಡಿದೆ. ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾರೆ. ನಾನು ಹಿಂದೆ ಮುಂದೆ ಯೋಚಿಸದೇ ಅಸ್ಸಾಂ ಪ್ರವಾಹಕ್ಕಾಗಿ ಹಣವನ್ನು ನೀಡಿದೆ ಎಂದು ಕಿಲಾಡಿ ತಿಳಿಸಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಅಕ್ಷಯ್ ತಮ್ಮ ಟ್ವಿಟ್ಟರಿನಲ್ಲಿ, “ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ತರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *