ವಾಟ್ಸಾಪ್‍ನಲ್ಲಿ ಫೋಟೋ ಕಳುಹಿಸಿ ಚಿಕ್ಕಪ್ಪನಿಗೆ ಕೊಲೆ ಬೆದರಿಕೆ

ತುಮಕೂರು: ಅಣ್ಣನ ಮಗನೊಬ್ಬ ಕೈಯಲ್ಲಿ ಮಚ್ಚು, ಕೊಡಲಿ, ಬಂದೂಕು ಹಿಡಿದಿರುವ ಫೋಟೋಗಳನ್ನು ಚಿಕ್ಕಪ್ಪನ ವಾಟ್ಸಾಪ್‍ನಲ್ಲಿ ಕಳುಹಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ರವಿಕಿರಣ್ ವಾಟ್ಸಾಪ್‍ನಲ್ಲಿ ಫೋಟೋ ಕಳುಹಿಸಿ ಬೆದರಿಕೆ ಹಾಕಿದ ಕಿಡಿಗೇಡಿ. ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಚಿಕ್ಕಪ್ಪ ಗಿರಿರಾಜನಿಗೆ ರವಿಕಿರಣ್ ಬೆದರಿಕೆ ಹಾಕಿದ್ದಾನೆ. ಮಾರನಹಳ್ಳಿ ಗ್ರಾಮದ ವಾಸಿಗಳಾದ ರವಿಕಿರಣ್ ಹಾಗೂ ಗಿರಿರಾಜ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಇಬ್ಬರ ನಡುವೆ ಎರಡು ತಿಂಗಳ ಹಿಂದೆ ಗಲಾಟೆ ನಡೆದಿದೆ.

ಈ ವೇಳೆ ರವಿಕಿರಣ್ ಕುಟುಂಬದವರು ಸೇರಿ ಗಿರಿರಾಜನಿಗೆ ಮಚ್ಚು ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಗಿರಿರಾಜನ ತಲೆಗೆ ಗಂಭೀರ ಗಾಯವಾಗಿತ್ತು. ತಲೆಗೆ ಬರೋಬ್ಬರಿ 72 ಹೊಲಿಗೆ ಹಾಕಿಸಿಕೊಂಡು ಗಿರಿರಾಜ ಜೀವನ್ಮರಣದ ಹೋರಾಟ ನಡೆಸಿ ಬದುಕುಳಿದು ಬಂದಿದ್ದಾನೆ.

ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಪ್ರಕರಣ ಕೂಡ ನ್ಯಾಯಾಲಯದ ಮೆಟ್ಟಿಲೇರಿದೆ. ಇದೀಗ ಹೊಸ ವರಸೆ ಪ್ರಾರಂಭಿಸಿರುವ ರವಿಕಿರಣ್, ಕೋರ್ಟ್‌ನಲ್ಲಿರುವ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಕೇಸ್ ವಾಪಸ್ ತೆಗೆದುಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಗಿರಿರಾಜನಿಗೆ ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕಾಗಿಯೇ ವಾಟ್ಸಾಪ್ ಗ್ರೂಪ್ ಗೆ ಮಚ್ಚು, ಕೊಡಲಿ, ಬಂದೂಕು ಹಿಡಿದಿರುವ ಫೋಟೋ ಕಳುಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *