ಇಂದು ವೈಕುಂಠ ಏಕಾದಶಿ – ನಂಬಿಕೆ ಏನು? ಯಾಕೆ ಆಚರಿಸುತ್ತಾರೆ?

ಇಂದು ವೈಕುಂಠ ಏಕಾದಶಿ. ವೈಕುಂಠದ ದ್ವಾರದ ಮೂಲಕ ಶ್ರೀಮನ್ ನಾರಾಯಣನ ದರ್ಶನ ಪಡೆದರೆ ಪಾಪ ಕರ್ಮಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ  ಹಿಂದೂ ಸಂಪ್ರದಾಯದಲ್ಲಿದೆ. ಹೀಗಾಗಿ ಇಂದು ಎಲ್ಲಾ  ವೈಷ್ಣವ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿದ್ದು, ವೈಕುಂಠ ದ್ವಾರ ನಿರ್ಮಿಸಲಾಗಿದೆ. ಬೆಳಗ್ಗೆಯಿಂದಲೇ ಬರುತ್ತಿರುವ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ವರ್ಷಕೊಮ್ಮೆ ಗಣೇಶನ ಚೌತಿ, ಮಹಾಶಿವರಾತ್ರಿ ಬರುತ್ತದೋ ಅದೇ ರೀತಿ ಈ ವೈಕುಂಠ ಏಕಾದಶಿ ವರ್ಷಕ್ಕೊಮ್ಮೆ ಬರುತ್ತದೆ. ಈ ಧನುರ್ ಮಾಸದಲ್ಲಿ ಬರುವ ವಿಶೇಷ ವೈಕುಂಠ ಏಕಾದಶಿಯ ದಿನ ವಿಷ್ಣುವಿನ ದರ್ಶನ ಮಾಡಿದರೆ ದೇವರ ಕೃಪೆ ಬೀಳುತ್ತದೆ ಎನ್ನುವ ನಂಬಿಕೆಯಿದೆ.

ನಂಬಿಕೆ ಏನು?
ಏಕಾದಶಿ ದಿನ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಉಪವಾಸದಿಂದ ವಿಷ್ಣು ದಶಾವತಾರದ ದೇವಾಲಯಕ್ಕೆ ಹೋಗಿ ವೈಕುಂಠ ದ್ವಾರದ ಮೂಲಕವೇ ದೇವರ ದರ್ಶನ ಪಡೆಯಬೇಕು. ಆ ನಂತರ ಸನ್ನಿಧಿಯಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸಬೇಕು. ಇದರಿಂದ ಹರಿ ನಾರಾಯಣನು ಸಂತೃಪ್ತನಾಗಿ ಭಕ್ತರಿಗೆ ಒಳಿತನ್ನ ಮಾಡುತ್ತಾನೆ.

ಏಕಾದಶಿ ದಿನ ಉಪವಾಸವನ್ನು ಭಕ್ತರು ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕಾದಶಿ ದಿನ ಉಪವಾಸ ವೃತ ಅನುಸರಿಸಿ ರಾಮಕೃಷ್ಣರ ದರ್ಶನ ಪಡೆಯುವುದರಿಂದ ದೇವರ ಆಶೀರ್ವಾದ ದೊರೆಯಲಿದೆ ಎನ್ನುವ ನಂಬಿಕೆಯಿದೆ.

ದೇಹವೇ ದೇವಾಲಯ ಎನ್ನುವ ಮಾತಿದೆ. ದೇವಾಲಯಕ್ಕೆ ಹೋಗಲು ಸಾಧ್ಯವಾಗದವರು ಮನೆಯಲ್ಲೇ ಪೂಜೆ ಮಾಡಬಹುದು. ನಿರ್ಮಲ ಚಿತ್ತದಿಂದ ಆ ಹರಿಯ 108 ನಾಮವನ್ನು ಸ್ಮರಣೆ ಮಾಡಬಹುದು.

Comments

Leave a Reply

Your email address will not be published. Required fields are marked *