ಇಂದು ಸಿಎಂ ವಿಶ್ವಾಸಮತಯಾಚನೆ ಮಾಡುವ ವಿಶ್ವಾಸ ಇದೆ – ಕರಂದ್ಲಾಜೆ

ಬೆಂಗಳೂರು: ಇಂದು ಸಂಜೆಯೊಳಗೆ ಸಿಎಂ ವಿಶ್ವಾಸಮತಯಾಚನೆ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸದನ ಮುಕ್ತಾಯದ ವೇಳೆ ಸೋಮವಾರ ವಿಶ್ವಾಸಮತಯಾಚನೆ ಮಾಡುತ್ತೇವೆ ಎಂದು ಸಿಎಂ ಹಾಗೂ ಸ್ಪೀಕರ್ ಭರವಸೆ ಕೊಟ್ಟಿದ್ದರು. ಹೀಗಾಗಿ ಇಂದು ಸಂಜೆ ಅಥವಾ ದಿನ ಕಳೆಯುವುದರೊಳಗೆ ವಿಶ್ವಾಸಮತಯಾಚನೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಬಹುಮತ ಕಳೆದುಕೊಂಡರೂ ಸಿಎಂ ಯಾಕೆ ಕುರ್ಚಿಗೆ ಅಂಟಿಕೊಂಡಿದ್ದಾರೋ ಗೊತ್ತಿಲ್ಲ. ಶಾಸಕರು ರಾಜೀನಾಮೆ ಕೊಟ್ಟು, ಬಹುಮತ ಇಲ್ಲದಿದ್ದಾಗ ಸಿಎಂ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ರಾಜ್ಯದ ಜನ ಇದನ್ನು ಗಮನಿಸುತ್ತಿದ್ದಾರೆ. ಇಂದು ವಿಶ್ವಾಸಮತ ಸಾಬೀತು ಮಾಡದಿದ್ದರೆ ಸಂಜೆ ನಂತರ ಬಿಜೆಪಿಯಿಂದ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಪೀಕರ್ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿದೆ. ಸುಮಾರು ಎರಡು ತಿಂಗಳಿನಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದ್ದರಿಂದ ಸಿಎಂ ಇಂದು ವಿಶ್ವಾಸಮತಯಾಚನೆ ಮಾಡಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಾರೆ ಅಂದುಕೊಂಡಿದ್ದೇವೆ. ಜನರು ಕೂಡ ಏನಾಗುತ್ತೆ ಎಂದು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *