ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯ: HAL ನಿವೃತ್ತ ಅಧಿಕಾರಿ ಅನಂತ ಪದ್ಮನಾಭ

ಬೆಂಗಳೂರು: ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿಯಲ್ಲ ಎಂದು ಎಚ್‍ಎಎಲ್ ನ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯವಾಗಿದೆ. ಸುಪ್ರೀಂ ಕೊಟ್ಟ ತೀರ್ಪನ್ನು ಗೌರವಿಸಲೇಬೇಕಿದೆ. ಆದ್ರೆ ಯಾಕೆ ಈ ತಪ್ಪು ನಿರ್ಧಾರ ಬಂತು ಅಂತ ಹೇಳಲು ಆಗುತ್ತಿಲ್ಲ. ಅನಿಲ್ ಅಂಬಾನಿ ಅವರ ಕಂಪನಿ ಕೆಲವೇ ದಿವಸಗಳ ಮೊದಲು ರಿಜಿಸ್ಟರ್ ಆಗಿದೆ. ಒಂದು ಕಾರ್ ಸರ್ವಿಸ್ ಗೆ ಬಿಡಬೇಕಿದ್ದರೂ ಅನುಭವ ಏನಿದೆ? ಕೆಲಸ ಏನು ಮಾಡ್ತಿದ್ದಾನೆ ಅಂತ ನೋಡಿ ಕೊಡುತ್ತೇವೆ. ಆದ್ರೆ ಇಲ್ಲಿ ಇಂತಹ ದೊಡ್ಡ ಡೀಲನ್ನು ಏನೂ ಗೊತ್ತಿಲ್ಲದೇ ಇರುವವರು, ಒಂದು ಶೆಡ್ ಹಾಕಿಕೊಂಡಿರುವವನಿಗೆ ಕೊಟ್ಟಿರುವುದು ಬಹಳ ತಪ್ಪು ಅಂತ ಹೇಳಿದರು.

ಇಂತಹ ದೊಡ್ಡ ಕಂಪನಿ ಎಚ್‍ಎಎಲ್ ಇದೂವರೆಗೂ ಏನೂ ರಕ್ಷಣಾ ಇಲಾಖೆಗೆ ಬೇಕಾದಂತಹ ಹೆಲಿಕಾಪ್ಟರ್, ವಿಮಾನ ನೀಡಿದೆ. ನಾವು ನಿಧಾನ ಅಂಥ ಹೇಳಬಹುದು. ಕೆಲಸದ ಸಮಯ ಹೆಚ್ಚು ಅಂತಾನೂ ಹೇಳಬಹುದು. ಅದಕ್ಕೆಲ್ಲ ಏನು ಉಪಾಯ, ಸುಧಾರಣೆ ಎಂಬುದು ನಮಗೆ ಗೊತ್ತಿದೆ. ಹಿಂದೆ ಜಾಗ್ವಾರ್ ಏರ್ ಕ್ರಾಫ್ಟ್ ಬಂದಾಗ ಕೂಡ ನಮ್ಮದು ಕೆಲಸದ ಸಮಯ ಜಾಸ್ತಿಯಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಬಳಿಕ ನಾವು ಅದನ್ನು ಸುಧಾರಣೆ ಮಾಡಿದ್ವಿ. ಇದೀಗ ಈ ತೀರ್ಪು ಸಮಾಧಾನಕರವಾಗಿಲ್ಲ. ಈ ತೀರ್ಪನ್ನು ನಾವು ಒಪ್ಪಲ್ಲ. ಮುಂದಿನ ಹೋರಾಟವನ್ನು ಮಾಡೇ ಮಾಡ್ತೀವಿ ಅಂತ ತಿಳಿಸಿದ್ರು.

126 ವಿಮಾನ ಬೇಕು ಎಂದು ವಾಯುಸೇನೆ ಮಾಡಿತ್ತು. ತೀರ್ಮಾನ ತೆಗೆದುಕೊಂಡಿದ್ದಿದ್ದು ಅವರು. ಅದನ್ನು ಪ್ರಧಾನಿ ಅವರು ಒಂದೇ ಬಾರಿ ಹೋಗಿ 36 ವಿಮಾನ ಖರೀದಿ ಅಂತ ಮಾಡಿಬಿಟ್ಟರು. 2.86 ಬಿಲಿಯನ್ ಡಾಲರ್ ಖರೀದಿ ಒಪ್ಪಂದ 8. 2 ಬಿಲಿಯನ್ ಡಾಲರ್ ಹೋಗಿ ಮತ್ತೆ ವಾಪಸ್ 7.8 ಬಿಲಿಯನ್ ಡಾಲರ್ ಗೆ ಬಂದಿದೆ. ನನ್ನ ಅಭಿಪ್ರಾಯದಲ್ಲಿ 20 ಸಾವಿರ ಕೋಟಿ ನಮಗೆ ನಷ್ಟ ಆಗುತ್ತಿದೆ. ಹೀಗಾಗಿ ಈ ತೀರ್ಪು ಸರಿಯಿಲ್ಲ ಅನ್ನೋದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಹೇಳಿದ್ದು ಏನು?
ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ತ್ರಿ ಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.

ಇದು ಶಾಸಕಾಂಗದ ವ್ಯಾಪ್ತಿಗೆ ಬರೋದ್ರಿಂದ ಇದು ದೇಶದ ಹಿತಾಶಕ್ತಿ ಹಾಗೂ ಭದ್ರತೆಗಾಗಿ ನಡೆದ ಒಪ್ಪಂದವಾಗಿದೆ. ಈ ಅಂಶಗಳು ಬಹಿರಂಗವಾದ್ರೆ ವಿರೋಧಿ ರಾಷ್ಟ್ರಗಳಿಗೆ ಜೆಟ್ ವಿಮಾನದಲ್ಲಿ ಬಳಸಿರುವ ತಂತ್ರಜ್ಞಾನಗಳ ಮಾಹಿತಿ ಸೋರಿಕೆಯಾಗುತ್ತದೆ ಅನ್ನೋ ಆತಂಕವನ್ನು ಸುಪ್ರೀಂನಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ವ್ಯಕ್ತಪಡಿಸಿದ್ದರು. ಈ ಅಂಶವನ್ನು ಇದೀಗ ಪರಿಗಣಿಸಿ ಮಾಹಿತಿ ಬಹಿರಂಗ ಮಾಡುವುದು ಬೇಡ ಜೊತೆಗೆ ತನಿಖೆಯೂ ಬೇಡ ಅನ್ನೋ ಅಭಿಪ್ರಾಯವನ್ನು ಸುಪ್ರೀಂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಮಟ್ಟದ ಗೆಲುವಾಗಿದೆ. ಈ ಮೂಲಕ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ.

ಯುಪಿಎ ಒಪ್ಪಂದ ಏನಿತ್ತು?
ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *