ಈ ಕಾರಣಕ್ಕಾದ್ರೆ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ: ಮುತಾಲಿಕ್

ಚಿಕ್ಕಬಳ್ಳಾಪುರ: ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ ಟಿಪ್ಪು ಒರ್ವ ಮತಾಂಧ, ಕನ್ನಡ ವಿರೋಧಿ ಎಂಬ ಕಾರಣಕ್ಕೆ ಮಾತ್ರ ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಅಂತ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಮುತಾಲಿಕ್, ಮುಸ್ಲಿಂ ಸಮುದಾಯದಲ್ಲಿ ಅಲ್ಲಾ ಹಾಗೂ ಪೈಗಂಬರ್ ಮಾತ್ರ ಪೂಜೆ ಮಾಡುತ್ತಾರೆ. ಆದರೆ ಮುಸ್ಲಿಮರ ವೋಟ್ ಬ್ಯಾಂಕಿಗಾಗಿ ರಾಜ್ಯ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ. ಹೀಗಾಗಿ ಈ ಬಾರಿ ರಾಜ್ಯಾದ್ಯಂತ ಮನೆ ಮನೆಗೆ ಟಿಪ್ಪುವಿನ ಮತಾಂಧತೆಯ 1 ಲಕ್ಷ ದಾಖಲೆಗಳ ಪುಸ್ತಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಕಳೆದ 2 ವರ್ಷಗಳಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ನಮ್ಮ ಖಂಡನೆ ಹಾಗೂ ವಿರೋಧವಿದೆ. ಇನ್ನೂ ವಿಧಾನಸೌಧ ವಜ್ರಮಹೋತ್ಸವ ವೇಳೆ ರಾಷ್ಟ್ರಪತಿಗಳಿಂದ ಟಿಪ್ಪು ಗುಣಗಾನ ವಿಚಾರ ಮಾಡಿದ್ದು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಅವರೇ ಫೈನಲ್ ಅಲ್ಲ ಅದಕ್ಕೂ ನಮ್ಮ ವಿರೋಧವಿದೆ ಎಂದು ಹೇಳಿದರು.

ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾನು ಸ್ಫರ್ಧೆ ಮಾಡಲು ನಿರ್ಧಾರ ಮಾಡಿದ್ದು, ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಸ್ಫರ್ಧಿಸುವೆ ಇಲ್ಲವಾದರೂ ಪಕ್ಷೇತರನಾಗಿ ಸ್ಫರ್ಧೆ ಮಾಡುವುದಾಗಿ ಮುತಾಲಿಕ್ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *