ಸಿಎಂ ಹೆಚ್‍ಡಿಕೆ ಬಜೆಟ್ ಹೇಳಿಕೆಗೆ ನೇರವಾಗಿಯೇ ತಿರುಗೇಟು ಕೊಟ್ಟ ಮಾಜಿ ಸಿಎಂ

ಬೆಂಗಳೂರು: ಇಷ್ಟು ದಿನ ಮುಸುಕಿನಲ್ಲೇ ಗುದ್ದಾಟ ನಡೆಸುತ್ತಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಈಗ ನೇರ ಹಣಾಹಣಿ ಆರಂಭವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಶುಕ್ರವಾರಷ್ಟೇ ಸಿಎಂ ಎಚ್‍ಡಿಕೆ, ಜುಲೈನಲ್ಲಿ ನಾನು ಬಜೆಟ್ ಮಂಡಿಸುತ್ತೇನೆ. ಕೆಲವರು ಬಜೆಟ್ ಯಾಕೆ ಮಂಡಿಸಬೇಕು ಎಂದು ಹೇಳುತ್ತಾರೆ. ಬಜೆಟ್ ಮಂಡನೆ ಮಾಡಿದರೆ ಎಲ್ಲಿ ಹೆಸರು ಮಾಡುತ್ತೇನೆ ಎಂಬ ಚಿಂತೆಯಲ್ಲಿ ಕೆಲವರಿದ್ದಾರೆ ಎಂದು ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದೆ ಟಾಂಗ್ ನೀಡಿದ್ದರು. ಇದಕ್ಕೆ ತಿರುಗೇಟು ಎನ್ನುವಂತೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಅಧಿಕಾರದಲ್ಲಿದ್ದ ವೇಳೆ ನಾನು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದು, ಹೊಸ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ನಮ್ಮ ಸರ್ಕಾರದ ಯೋಜನೆಗಳು ಜನರಿಂದ ಹೆಚ್ಚು ಮೆಚ್ಚುಗೆ ಗಳಿಸಿವೆ. ಈ ಯೋಜನೆಗಳನ್ನು ಇಂದಿನ ಸರ್ಕಾರವು ಮುಂದುವರಿಸಿಕೊಂಡು ಹೇಗಬೇಕಿದೆ. ಅಲ್ಲದೇ ಕಳೆದ ಬಾರಿಯೇ ನಮ್ಮ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿರುವುದರಿಂದ ಇಂದು ಮತ್ತೆ ಬಜೆಟ್ ಮಾಡುವ ಅಗತ್ಯವಿಲ್ಲ. ಬೇಕಾದರೆ ಪೂರಕ ಬಜೆಟ್ ಮಂಡನೆ ಮಾಡಿ ಹೊಸ ಯೋಜನೆಗಳನ್ನು ಅದರಲ್ಲಿ ಸೇರಿಸಬಹುದು ಎಂದು ಹೇಳಿ ಎಚ್‍ಡಿಕೆಗೆ ಟಾಂಗ್ ನೀಡಿದರು.

ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿ ಆಗಲು ಬಜೆಟ್ ಅಗತ್ಯವಿದೆ. ಜುಲೈ ನಲ್ಲಿ ಈ ಕುರಿತು ಸ್ಪಷ್ಟ ಕಾರ್ಯಕ್ರಮಗಳನ್ನು ನೀಡಲು ಬಜೆಟ್ ಅಗತ್ಯವಿದೆ ಎಂದು ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಮಂಡನೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಸದ್ಯ ಪೂರ್ಣ ಬಜೆಟ್ ಮಂಡನೆ ಮಾಡುವುದು ಅಗತ್ಯವಿಲ್ಲ. ಪೂರ್ಣ ಪ್ರಮಾಣದ ಬಜೆಟ್ ಗೆ ಈಗಾಗಲೇ ಅನುಮೋದನೆಯನ್ನು ಸಹ ಪಡೆಯಲಾಗಿದೆ ಎಂದು ಹೇಳುವ ಮೂಲಕ ನೇರವಾಗಿಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದು ಬೇಡ ಎನ್ನುವ ತಮ್ಮ ಅಭಿಪ್ರಾಯವನ್ನು ಸಿದ್ದರಾಮಯ್ಯಹೇಳಿದರು.

Comments

Leave a Reply

Your email address will not be published. Required fields are marked *