ಬೈಕ್‍ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರು ಅಂದರ್

– ಬಂಧಿತರಿಂದ 3.5 ಲಕ್ಷ ರೂ. ಮೌಲ್ಯದ 20 ಮೊಬೈಲ್, ಬೈಕ್ ವಶ

ಬೆಂಗಳೂರು: ಬೈಕ್‍ನಲ್ಲಿ ಬಂದು ಮೊಬೈಲ್‍ಗಳನ್ನ ಎಗರಿಸುತ್ತಿದ್ದ ಖತರ್ನಾಕ್ ಕಳ್ಳರನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ.

ನಗರದ ಸಯ್ಯದ್ ಇರ್ಪಾನ್ (20) ಹಾಗೂ ಮಹಮ್ಮದ್ ಅರ್ಬಾಜ್ (21) ಬಂಧಿತ ಆರೋಪಿಗಳು. ಬಂಧಿತರಿಂದ 3.5 ಲಕ್ಷ ರೂ. ಮೌಲ್ಯದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಸಯ್ಯದ್ ಹಾಗೂ ಮಹಮ್ಮದ್ ವಿವಿಪುರಂ, ಮಕ್ಕಳ ಕೂಟ ಸೇರಿದಂತೆ ವಿವಿಧೆಡೆ ಮೊಬೈಲ್ ದೋಚುತ್ತಿದ್ದರು. ಮೊಬೈಲ್ ಕಳ್ಳರ ಹಾವಳಿಯಿಂದಾಗಿ ಠಾಣೆಗೆ ಒಂದಲ್ಲಾ ಒಂದು ದೂರು ಬರುತ್ತಲೇ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿವಿಪುರಂ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯಚರಣೆ ನಡೆಸಿದ್ದರು.

ಒಂದು ತಿಂಗಳು ಕಳೆದರೂ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಎರಡು ದಿನಗಳ ಹಿಂದೆಯಷ್ಟೇ ಮನೋಜ್ ಎಂಬ ಯುವಕನಿಂದ ಆರೋಪಿಗಳು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರಿ ನೀಡಿದ್ದ ಮನೋಜ್, ಕಳ್ಳರು ಮೊಬೈಲ್ ಎಗರಿಸಿದ್ದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದರು.

ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿಸಿದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಳಿಕ ಬಂಧಿತರಿಂದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿವಿಪುರಂ ಪೊಲೀಸರು, ಆರೋಪಿಗಳು ಈ ಹಿಂದೆ ಎಲ್ಲೇಲ್ಲಿ ಕಳ್ಳತ ಎಗಿದ್ದರು ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *