ಹಾಸನ ರಾಜಕೀಯಕ್ಕಾಗಿ ವಿಟಿಯು ಇಬ್ಭಾಗ: ಸಂಸದ ಅಂಗಡಿ ಆಕ್ರೋಶ

ಬೆಂಗಳೂರು: ರಾಜಕೀಯ ಉದ್ದೇಶಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಒಡೆಯಲು ಮುಂದಾಗಿದೆ ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?
ವಿಟಿಯುಗೆ ಸುಮಾರು 2 ದಶಕದ ಇತಿಹಾಸವಿದೆ, ಕೇವಲ ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಬ್ಭಾಗ ಮಾಡುತ್ತಿರುವುದು ಎಷ್ಟು ಸಮಂಜಸ? ಇದು ಬೆಳಗಾವಿ ಜನತೆಗೆ ಮೈತ್ರಿ ಸರಕಾರ ಮಾಡುತ್ತಿರುವ ದ್ರೋಹ. ಕಾಂಗ್ರೆಸ್ ಪಕ್ಷದ ಮುಖಂಡರು ಇದರ ನೇರ ಹೊಣೆಗಾರರಾಗುತ್ತಾರೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಸುರೇಶ್ ಅಂಗಡಿ ಆಗ್ರಹಿಸಿದ್ದಾರೆ.

ಹಾಸನ ಸೇರಿದಂತೆ ರಾಜ್ಯದ ಯಾವುದೇ ಭಾಗವನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ನಮ್ಮ ವಿರೋಧ ಇಲ್ಲ. ಆದರೆ ಉತ್ತರ ಕರ್ನಾಟಕ ಮತ್ತು ಬೆಳಗಾವಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ? ಈ ಮೂಲಕ  ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ವಿಟಿಯು ಒಡೆಯುವ ನಿರ್ಧಾರವನ್ನು ನಾನು  ವಿರೋಧಿಸುತ್ತೇನೆ ಎಂದು ಅಂಗಡಿ ಹೇಳಿದ್ದಾರೆ.

ಸಿಎಂ ಹೇಳಿದ್ದು ಏನು?
ನಮ್ಮ ಸರ್ಕಾರವು ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಉದ್ದೇಶಿಸಿದೆ. ಈಗ ಕರ್ನಾಟಕದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಂಬಂಧಿತ ವಿಷಯಗಳು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೇಂದ್ರೀಕೃತವಾಗಿವೆ. ಆದ್ದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೌಗೋಳಿಕ ಆಧಾರದ ಮೇಲೆ ಎಂಜಿನಿಯರಿಂಗ್ ಕಾಲೇಜುಗಳನ್ನು ಮರುವಿಂಗಡಣೆ ಮಾಡಿ ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಜೆಟ್‍ನಲ್ಲಿ ಪ್ರಕಟಿಸಿದ್ದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಇಬ್ಭಾಗ ಮಾಡುವ ಪ್ರಸ್ತಾಪಕ್ಕೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ ತಿಳಿಸಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *