ರೋಹಿತ್ ಜೊತೆ ಮನಸ್ತಾಪ – ಕೊಹ್ಲಿ ಪತ್ರಿಕಾಗೋಷ್ಠಿ ದಿಢೀರ್ ರದ್ದು?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಮನಸ್ತಾಪ ಜೋರಾಗಿದೆ ಎನ್ನುವ ಸುದ್ದಿಯ ಬೆನ್ನಲ್ಲೇ, ವಿಂಡೀಸ್ ಟೂರ್ನಿಗೆ ಮುನ್ನಾ ನಡೆಯಬೇಕಿದ್ದ ಪ್ರತಿಕಾಗೋಷ್ಠಿಯನ್ನು ದಿಢೀರ್ ರದ್ದು ಪಡಿಸಲಾಗಿದೆ.

ಕೊಹ್ಲಿ- ರೋಹಿತ್ ನಡುವಿನ ಮನಸ್ತಾಪ ಸುದ್ದಿ ಮಾಧ್ಯಮಗಳ ಸೃಷ್ಟಿ ಎಂದು ಬಿಸಿಸಿಐ ವಕ್ತಾರರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ವಿಂಡೀಸ್ ಟೂರ್ನಿಯ ಮುನ್ನ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ರದ್ದಾಗಿದೆ. ನಾವು ಕಾರ್ಯಕ್ರಮವನ್ನು ಏರ್ಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದೆವು, ಆದರೆ ಅದು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಯಾವುದೇ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ಟೀಂ ಇಂಡಿಯಾ ಸೋಮವಾರ ರಾತ್ರಿ ವೆಸ್ಟ್ ಇಂಡೀಸ್‍ಗೆ ಪ್ರಯಾಣ ಬೆಳೆಸಲಿದ್ದು, ರೋಹಿತ್ ರೊಂದಿಗೆ ಮನಸ್ತಾಪ ಹೊಂದಿರುವ ಪ್ರಶ್ನೆಗಳನ್ನು ಕೇಳಬಹುದು. ಸುದ್ದಿಗೋಷ್ಠಿಯಲ್ಲಿ ಎದುರಾಗಬಹುದಾಗಿದ್ದ ಪ್ರಶ್ನೆಗಳಿಂದ ಹೊಸ ವಿವಾದ ಸೃಷ್ಟಿ ಆಗದಂತೆ ನೋಡಿಕೊಳ್ಳಲು ಕೊಹ್ಲಿ ಮಾಧ್ಯಮಗೋಷ್ಠಿಗೆ ಭಾಗವಹಿಸದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇತ್ತ ಶನಿವಾರ ಮುಂಬೈ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯವಳಿ ವೇಳೆ ಹಾಜರಿದ್ದ ಕೊಹ್ಲಿ, ಮಾಧ್ಯಮಗಳಿಂದ ದೂರವೇ ಉಳಿದಿದ್ದರು. ವಿಮಾನ ಏರುವ ಮುನ್ನ ಕೊಹ್ಲಿ ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವೆಸ್ಟ್ ಇಂಡೀಸ್ ಪ್ರವಾಸದ ಬಗ್ಗೆ ಯಾವುದೇ ಪ್ರಶ್ನೆ ತೆಗೆದುಕೊಳ್ಳುವುದಿಲ್ಲ ಎಂದು ಉತ್ತರಿಸಿದ್ದಾರೆ.

ಕೆಲ ಸಮಯದ ಹಿಂದೆ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅವರನ್ನ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದರು. ಆ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಕೂಡ ಅನ್ ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಾಕಿದ್ದ ಸ್ಟೇಟಸ್ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅನುಷ್ಕಾ ಕೂಡ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾರನ್ನು ಅನ್ ಫಾಲೋ ಮಾಡಿದ್ದರು.

Comments

Leave a Reply

Your email address will not be published. Required fields are marked *