ವೈರಲ್ ಫೀವರ್ ಹಾವಳಿ; ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೇ ರೋಗಿಗಳ ಪರದಾಟ

ಚಿತ್ರದುರ್ಗ: ಇತ್ತೀಚೆಗೆ ಎಲ್ಲೆಡೆ ವೈರಲ್ ಫೀವರ್ (Viral Fever) ಹಾಗೂ ಚಿಕನ್ ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ತುಂಬಾ ವೇಗವಾಗಿ ಹರಡುತ್ತಿದೆ. ಆದರೆ ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರೋಗಿಗಳು ಬೆಡ್‌ಗಳ ಸಮಸ್ಯೆಯಿಂದ (Bed Problem) ಪರದಾಡುತ್ತಿದ್ದಾರೆ.

ಹೌದು, ಇಲ್ಲಿನ ನೂತನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್‌ಗಳು ಭರ್ತಿಯಾಗಿವೆ ಅಂತ ಬಾಣಂತಿಯರು ಹಾಗೂ ಹಸುಗೂಸುಗಳನ್ನು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗ್ತಿದೆ. ಹೀಗಾಗಿ, ರೋಗ ಮತ್ತಷ್ಟು ಉಲ್ಬಣಗೊಳ್ತಿದ್ದು, ರೋಗಿಗಳು ಪ್ರಾಣ ಕೈಯಲ್ಲಿಡಿದುಕೊಂಡು ಚಿಕಿತ್ಸೆ ಪಡೆಯುವಂತಾಗಿದೆ. ಇದನ್ನೂ ಓದಿ: ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ 100 ಬೆಡ್‌ಗಳ ತಾಯಿ ಮತ್ತು ಮಕ್ಕಳ ನೂತನ ಆಸ್ಪತ್ರೆಯು ಗರ್ಭಿಣಿಯರು ಹಾಗೂ ಮಕ್ಕಳ ಪಾಲಿಗೆ ಸಂಜೀವಿನಿ ಆಗಬೇಕಿತ್ತು. ಆದ್ರೆ, ಹೆರಿಗೆಯಾದ ಬಳಿಕ ಮಗುವಿಗೆ ಏನಾದರೂ ಉಸಿರಾಟದ ಸಮಸ್ಯೆ, ಜಾಂಡೀಸ್ ಸೇರಿದಂತೆ ಇನ್ನಿತರ ರೋಗಗಳು ಉಲ್ಬಣವಾದ್ರೆ ಈ ಆಸ್ಪತ್ರೆ ಬಾಣಂತಿಯರ ಪರಿಸ್ಥಿತಿ ನರಕಕ್ಕಿಂತ ಕಡೆಯಾಗಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ – ಏನಿದು ಹೊಸ ಯೋಜನೆ?

ಬಾಣಂತಿಯರು ನೆಲದ ಮೇಲೆಯೇ ಮಲಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಇತ್ತೀಚೆಗೆ ವೈರಲ್ ಫೀವರ್ ಹಾಗು ಚಿಕನ್ ಗುನ್ಯಾದಂತಹ ವಿವಿಧ ಸಾಂಕ್ರಾಮಿಕ ರೋಗಗಳು ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಮಕ್ಕಳ ವಾರ್ಡ್ ಫುಲ್ ಆಗಿದ್ದು, ಬೆಡ್‌ಗಳು ಭರ್ತಿಯಾಗಿವೆ.

 ಹೀಗಾಗಿ ಚಿಕಿತ್ಸೆಗೆಂದು ಬರುವ ಮಕ್ಕಳಿಗೂ ನೆಲವೇ ಗತಿಯಾಗಿದ್ದು, ಚಿಕಿತ್ಸೆ ಸಿಕ್ರೆ ಸಾಕಪ್ಪ, ಬೆಡ್ ಇಲ್ಲವಾದ್ರು ಪರವಾಗಿಲ್ಲ ಅಂತಿದ್ದಾರೆ. ಇನ್ನು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ವಿವಿಧ ವೈರಲ್ ಅಟ್ಯಾಕ್‌ನಿಂದ ರೋಗ ಮತ್ತಷ್ಟು ಹೆಚ್ಚಾಗುವ ಭೀತಿ ಕಾಡುತ್ತಿದೆ. ಆದ್ರೆ ಸಂಬಂಧಪಟ್ಟ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವೀಂದ್ರ ಅವರು ಮಾತ್ರ ನಿದ್ರಾವಸ್ಥೆಯಲ್ಲಿರೋದು ವಿಪರ್ಯಾಸ ಅಂತ ರೋಗಿಗಳು ಆಕ್ರೋಶ ಹೊರಹಾಕಿದ್ದಾರೆ.

ಈ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಆದ್ರೆ ಬೆಡ್‌ಗಳ ಸಮಸ್ಯೆ ನಿವಾರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ, ಚಿಕಿತ್ಸೆಗೆಂದು ಬರುವ ರೋಗಿಗಳು ಬೆಡ್ ಸಿಗಲಾರದೇ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹಾಗೂ ಮಡಿಲಲ್ಲಿ ಮಲಗಿಸಿಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವಂತೆ ರೋಗಿಗಳು ಆಗ್ರಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕರೂ ಕೂಡ ಬೆಡ್ ಸಿಗಲಾರದೇ ಬಾಣಂತಿಯರು ಹಾಗೂ ಮಕ್ಕಳು ಪರದಾಡುವಂತಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನವಜಾತಶಿಶುಗಳ ತಾಯಂದಿರ ಹಿತದೃಷ್ಟಿಯಿಂದ ಸುಸಜ್ಜಿತ ತಂಗುದಾಣ ನಿರ್ಮಿಸುವ ಮೂಲಕ ಬಾಣಂತಿಯರ ಹಿತ ಕಾಯಬೇಕೆಂಬುದು ಎಲ್ಲರ ಆಶಯವಾಗಿದೆ.

Comments

Leave a Reply

Your email address will not be published. Required fields are marked *