ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ -ಕರ್ಫ್ಯೂ ಜಾರಿ

ಶ್ರೀನಗರ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಜಮ್ಮು ಕಾಶ್ಮೀರದ ಹಲವೆಡೆ ಪ್ರತಿಭಟನೆ ನಡೆದಿದ್ದು, ಈ ವೇಳೆ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲು ತೂರಾಟ ಕೂಡ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕರ್ಫ್ಯೂ  ಜಾರಿ ಮಾಡಲಾಗಿದೆ.

ಜಮ್ಮು  ನವಬಾದ್, ಭಕ್ಷಿನಗರ್, ಜಾನಿಪುರ್ ಸೇರಿ ಹಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸೇನೆಯ ಅಧಿಕಾರಿಗಳು ಕೂಡ ಜನರಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿದರೂ ಕೂಡ ಹೋರಾಟಗಳು ತೀವ್ರಗೊಂಡ ಕಾರಣದಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಮೊಬೈಲ್ ಹಾಗೂ ಇಂಟರ್‍ನೆಟ್, ಫೋನ್ ಸಂಪರ್ಕ ಬಂದ್ ಮಾಡಲಾಗಿದೆ.

ಜಮ್ಮು ಕಾಶ್ಮೀರದ ಉಪ ಕಮಿಷನರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜಮ್ಮು ಸಿಟಿ ಸೇರಿದಂತೆ ವಿವಿಧೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಅದರಲ್ಲೂ ಜಮ್ಮು ಓಲ್ಡ್ ಸಿಟಿ ಪ್ರದೇಶದಲ್ಲಿ ಹೆಚ್ಚಿನ ಪ್ರತಿಭಟನೆಗಳು ನಡೆದಿದೆ. ಧ್ವನಿವರ್ಧಕಗಳಲ್ಲಿ ಈ ಬಗ್ಗೆ ರಕ್ಷಣಾ ಪಡೆ ಮಾಹಿತಿ ನೀಡಿ ಘೋಷಣೆ ಮಾಡಲಾಗುತ್ತಿದೆ. ಪರಿಣಾಮ ನಗರದಲ್ಲಿ ಬಹುತೇಕ ಸ್ತಬ್ಧವಾಗಿದೆ.

ದಾಳಿಯನ್ನ ಖಂಡಿಸಿದ ಜಮ್ಮು ಕಾಶ್ಮೀರದ ವ್ಯಾಪಾರಿ ಒಕ್ಕೂಟ ಕೂಡ ಬಂದ್‍ಗೆ ಕರೆ ನೀಡಿದ್ದು, ಹೈ ಕೋರ್ಟ್ ವಕೀಲರ ಸಂಘ ಸೇರಿದಂತೆ ಹಲವು ಸ್ಥಳೀಯ ಸಂಘಟನೆಗಳು ದಾಳಿಯನ್ನು ಖಂಡಿಸಿದೆ. ಇದೇ ವೇಳೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ಅವರಿಗೆ ಬುಲಾವ್ ನೀಡಿದ್ದು, ಸೊಹೈಲ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *