ಭಜರಂಗಿ ಪಕ್ಕದಲ್ಲಿ ಮೋದಿ – ‘ನಮೋ ನಮ್ಮ ದೇವರು’ ಎಂದ ಗ್ರಾಮಸ್ಥರು

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಬಿಹಾರದ ಕಟಿಹಾರ್ ಜಿಲ್ಲೆಯ ಆನಂದಪುರದಲ್ಲಿ ಹನುಮಂತನ ದೇಗುಲದ ಪಕ್ಕದಲೇ ನಮೋ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರು ಅಭಿಮಾನ ಮೆರೆದಿದ್ದಾರೆ.

ಹೌದು. ಹನುಮಂತ ದೇವರ ದೇವಾಲಯದ ಪಕ್ಕದಲ್ಲಿ ಮೋದಿ ಪ್ರತಿಮೆ ಪ್ರತಿಷ್ಠಾಪಿಸಿರುವ ಗ್ರಾಮಸ್ಥರು, ಮೋದಿ ನಮ್ಮ ದೇವರು ಎಂದು ಪ್ರಧಾನಿಗೆ ವಿಶೇಷ ಗೌರವ ನೀಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ದಿನದಿಂದ ಅಂದರೆ 2014 ರಿಂದ ಇಲ್ಲಿಯವರೆಗೂ ತಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ ನಮ್ಮ ಪಾಲಿಗೆ ಅವರು ದೇವರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೋದಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಸಿಟ್ಟಿಗೆದ್ದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಮತಗಳನ್ನು ಸೆಳೆಯಲು ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರು ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆನಂದಪುರ ಗ್ರಾಮದಲ್ಲಿ ಬಹುತೇಕ ಮಂದಿ ಬೆಂಗಾಲಿ ಹಿಂದೂಗಳಾಗಿದ್ದು, ಸ್ವಾತಂತ್ರ್ಯ ಬಂದ ದಿನದಿಂದ ನಮ್ಮ ಗ್ರಾಮವನ್ನು ಅಧಿಕಾರಿಗಳು ಮತ್ತು ಸರ್ಕಾರಗಳು ನಿರ್ಲಕ್ಷಿಸಿಕೊಂಡು ಬಂದಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಗ್ರಾಮಸ್ಥರು ನಮೋ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿ ನಮ್ಮ ದೇವರು, ನಮ್ಮ ದೇವರನ್ನು ಕಣ್ಣಾರೆ ಕಾಣುವ ಆಸೆ ಇದೆ. ನಮ್ಮ ನೆಲದಲ್ಲಿ ಮೋದಿಜಿ ಓಡಾಡಬೇಕೆಂದು ಬಯಸಿದ್ದೇವೆ ಎಂದು ಗ್ರಾಮಸ್ಥರು ಆಸೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *