ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಲಾಗದೇ ಗ್ರಾಮಸ್ಥರಿಬ್ಬರೇ ರಸ್ತೆ ಗುಂಡಿ ಮುಚ್ಚಿದ್ರು!

ಮಂಡ್ಯ: ರಸ್ತೆಯ ಮಧ್ಯದಲ್ಲಿದ್ದ ಗುಂಡಿಯಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಲಾಗದೇ, ಗ್ರಾಮಸ್ಥರಿಬ್ಬರು ಗುಂಡಿ ಮುಚ್ಚಿ ಮಾನವೀಯತೆ ಮೆರೆದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಕೃಷ್ಣ ಎಂಬವರ ಮನೆ, ಮಂಡ್ಯದಿಂದ ಕೆಎಂದೊಡ್ಡಿಗೆ ಸಂಚರಿಸುವ ರಸ್ತೆಯ ಪಕ್ಕದಲ್ಲಿಯೇ ಇದೆ. ಕೃಷ್ಣ ಅವರ ಮನೆಯ ಮುಂದೆ ರಸ್ತೆಯಲ್ಲಿ ಎರಡು ದೊಡ್ಡ ಗುಂಡಿಗಳಾಗಿದ್ದವು. ಬೈಕ್ ಸವಾರರು ಆ ಗುಂಡಿಗಳ ಅರಿವಿಲ್ಲದೇ ಬಿದ್ದು ಗಾಯಗೊಳ್ಳುತ್ತಿದ್ದರು. ಬೈಕ್ ಸವಾರರು ಮನೆಯ ಮುಂದೆಯೇ ಬೀಳುತ್ತಿದ್ದರಿಂದ ಅವರನ್ನು ಉಪಚರಿಸುವ ಕೆಲಸವನ್ನೂ ಕೃಷ್ಣ ಅವರ ಮನೆಯವರೇ ಮಾಡುತ್ತಿದ್ದರು.

ಸುಮಾರು ಏಳೆಂಟು ಜನ ಕೃಷ್ಣ ಅವರ ಮನೆಯ ಮುಂದಿದ್ದ ರಸ್ತೆಯಲ್ಲಿನ ಗುಂಡಿಗೆ ಬಿದ್ದು ಗಾಯಗೊಂಡಿದ್ರು. ಇದೆಲ್ಲವನ್ನು ನೋಡಿದ ಕೃಷ್ಣ ತಮ್ಮದೇ ಗ್ರಾಮದ ಸುರೇಶ್ ಎಂಬವರ ಸಹಾಯ ಪಡೆದು ಮಣ್ಣು ಹಾಕಿ ತಾತ್ಕಾಲಿಕವಾಗಿ ರಸ್ತೆ ಗುಂಡಿಯನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ತಾತ್ಕಾಲಿಕವಾಗಿ ಹಳ್ಳಿಯ ಜನ ಮಾಡಿರುವ ಕೆಲಸಕ್ಕೆ ಒಂದು ಶಾಶ್ವತ ಪರಿಹಾರ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.

 

Comments

Leave a Reply

Your email address will not be published. Required fields are marked *