ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮಸ್ಥರಿಂದ ದೇಹದಾನ

ಕಲಬುರಗಿ: ಶವ ಹೂಳಲು ಸ್ಥಳವಿಲ್ಲದ ಕಾರಣ ಮೃತ ವೃದ್ಧೆಯ ದೇಹವನ್ನು ದೇಹದಾನ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ.

75 ವರ್ಷದ ಸುಭದ್ರಮ್ಮ ಗುರುವಾರ ರಾತ್ರಿ ಸಾವನಪ್ಪಿದ್ದಾರೆ. ಆದರೆ ಮೃತರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಜಮೀನಿಲ್ಲ. ಹೀಗಾಗಿ ಕಲಬುರಗಿ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ಸುಭದ್ರಮ್ಮ ದೇಹವನ್ನು ದಾನ ಮಾಡಿದ್ದಾರೆ.

ಮೂರು ಸಾವಿರ ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಶವ ಹೂಳಲು ಕೇವಲ 20 ಗುಂಟೆ ಜಮೀನಿದೆ. ಹೀಗಾಗಿ ಯಾರಾದಾದರೂ ಶವ ಹೂಳಬೇಕು ಎಂದರೆ ಬೇರೆಯವರ ಶವ ತೆಗೆದೆ ಹೂಳುವ ಪರಿಸ್ಥಿತಿಯಿದೆ. ಇದನ್ನು ಅರಿತ ಆ ಗ್ರಾಮದ 40ಕ್ಕೂ ಹೆಚ್ಚು ಜನ ಈಗಾಗಲೇ ದೇಹದಾನ ಮಾಡಿದ್ದಾರೆ.

ಇನ್ನು ದುರಂತ ಎಂದರೆ ಸಮಾಜಕಲ್ಯಾಣ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದ ಜನರಿಗೆ ಈ ಪರಿಸ್ಥಿತಿ ಬಂದಿದೆ. ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ಈ ಕುರಿತು ವರದಿ ಪ್ರಸಾರ ಮಾಡಿದ್ದಾಗ ಜಮೀನು ಖರೀದಿಗೆ ಹಣ ಬಿಡುಗಡೆಯಾಗಿದೆ.

ಆದರೆ ಇಲ್ಲಿನ ಜನಪ್ರತಿನಿಧಿ ಹಾಗು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರಗೆ ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡಿಲ್ಲ. ಪರಿಣಾಮ ಜಮೀನು ಹೊಂದಿದವರು ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಹೀಗೆ ದೇಹದಾನ ಮಾಡಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *